ತಿರುವನಂತಪುರ: ‘ಕೋವಿಡ್ 19’ ಸೋಂಕು ದೇಶದಲ್ಲಿ ವ್ಯಾಪಿಸಿದೆ. ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39ಕ್ಕೆ ಏರಿದೆ.
ಮುಂಜಾಗ್ರತಾ ಕ್ರಮಗಳಿಗೆ ಸೇನೆ, ವಿವಿಧ ರಾಜ್ಯಗಳು ಒತ್ತು ನೀಡಿವೆ. ಸೋಂಕು ಪೀಡಿತರಿಗೆ ಚಿಕಿತ್ಸೆ ಒದಗಿಸಲು ಪ್ರತ್ಯೇಕವಾಗಿ ತುರ್ತು ವಿಭಾಗ ರಚಿಸಿ, ಹಾಸಿಗೆಗಳನ್ನು ಕಾದಿರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಏಮ್ಸ್ ಆಡಳಿತ ಮಂಡಳಿಗೆ ಕೋರಿದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಈಚೆಗೆ ಇಟಲಿಯಿಂದ ಮರಳಿದ್ದ ದಂಪತಿ ಮತ್ತು ಅವರ ಪುತ್ರನಿಗೆ ಸೋಂಕು ತಗುಲಿದೆ. ಇವರ ಮೂಲಕ ಅವರ ಇಬ್ಬರು ಸಂಬಂಧಿಕರಿಗೂ ವ್ಯಾಪಿಸಿದೆ.
ಮಂಗಳೂರು ವರದಿ: ದುಬೈನಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಬಂದಿಳಿದ ವ್ಯಕ್ತಿಯೊಬ್ಬರಲ್ಲಿ ಜ್ವರದ ಲಕ್ಷಣಗಳು ಕಂಡುಬಂದಿದ್ದು, ಸೋಂಕಿನ ಶಂಕೆ ಮೇಲೆ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಿಶೇಷ ವಾರ್ಡ್ನಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ.