ನೋಯ್ಡ: ಕರ್ನಾಟಕದ ಮಾಜಿ ರಾಜ್ಯಪಾಲ ತ್ರಿಲೋಕ ನಾಥ ಚತುರ್ವೇದಿ ಅವರು ತಮ್ಮ 90 ವಯಸ್ಸಿನಲ್ಲಿ ಭಾನುವಾರ ರಾತ್ರಿ ನೋಯ್ಡದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸೆರೆಳೆದಿದ್ದಾರೆ.
ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಕುಟುಂಬಸ್ಥರು ನೋಯ್ಡದ ಕೈಲಾಶ್ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರು. ಆದರೆ, ಅಷ್ಟುಹೊತ್ತಿಗಾಗಲೇ ಇಹಲೋಕ ತ್ಯಜಿಸಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
1929ರ ಜನವರಿ 19ರಂದು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಚತುರ್ವೇದಿ ಜನಿಸಿದ್ದರು. ಐಎಎಸ್ ಅಧಿಕಾರಿಯೂ ಆಗಿದ್ದ ಅವರು, ಭಾರತ ಸರ್ಕಾರದ ಸಿಎಜಿ (ಆಡಿಟರ್ ಜನರಲ್) ಆಗಿದ್ದರು. 1991ರಲ್ಲಿ ಅವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
2002ರಿಂದ 2007ರ ಅವಧಿಯಲ್ಲಿ ಅವರು ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಟಿ.ಎನ್ ಚುತುರ್ವೇದಿ ಅವರಿಗೆ ಮೂವರು ಪುತ್ರರು, ಒಬ್ಬರು ಪುತ್ರಿ ಇದ್ದಾರೆ. ಇಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದರೆ, ಪುತ್ರಿ ನೋಯ್ಡದ ಸೆಕ್ಟರ್ 17ರಲ್ಲಿ ವಾಸವಿದ್ದಾರೆ.
ಅವರ ಅಂತ್ಯ ಸಂಸ್ಕಾರವನ್ನು ಕಾರಣಾಂತರಗಳಿಂದಾಗಿ ಎರಡು ದಿನಗಳ ನಂತರ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಸದ್ಯ ಅವರ ಶರೀರವನ್ನು ಕೈಲಾಶ್ ಆಸ್ಪತ್ರೆಯಲ್ಲೇ ಇರಿಸಲಾಗಿದೆ.