ನವದೆಹಲಿ: ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ ನಾಮಪತ್ರದ ಜತೆಗೆ ನೀಡಿದ ಪ್ರಮಾಣಪತ್ರದ ಬಗ್ಗೆ ವ್ಯಕ್ತ ವಾದ ಆಕ್ಷೇಪದಿಂದಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಬುಧವಾರ ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು.
ಗಂಭೀರ್ ಅವರ ನಾಮಪತ್ರದಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಎಎಪಿ ಅಭ್ಯರ್ಥಿ ಅತೀಶ್ ಅವರು ಆಕ್ಷೇಪ ಎತ್ತಿದರು. ಹಾಗಾಗಿ, ಅವರ ನಾಮಪತ್ರವನ್ನು ಕೆಲಕಾಲ ತಡೆ ಹಿಡಿಯಲಾಯಿತು. ಬಳಿಕ, ನಾಮಪತ್ರವನ್ನು ಪರಿಶೀಲಿಸಿ ಸಂಜೆಯ ಹೊತ್ತಿಗೆ ಅಂಗೀಕರಿಸಲಾಯಿತು.
ಗಂಭೀರ್ ಅವರ ಪ್ರಮಾಣಪತ್ರವನ್ನು ಮುದ್ರಿಸಿರುವ ಛಾಪಾ ಕಾಗದದಲ್ಲಿ ದಿನಾಂಕ 2019ರ ಏಪ್ರಿಲ್ 23 ಎಂದಿದೆ. ಆದರೆ, ನೋಟರಿಯ ಮೊಹರಿನಲ್ಲಿ ದಿನಾಂಕವು ಏಪ್ರಿಲ್ 18 ಮತ್ತು ಏಪ್ರಿಲ್ 19 ಎಂದಿದೆ ಎಂಬ ಬಗ್ಗೆ ಎಎಪಿ ಅಭ್ಯರ್ಥಿ ಗಮನ ಸೆಳೆದರು. ಹಾಗಾಗಿ ಮತ್ತೊಮ್ಮೆ ಪರಿಶೀಲಿಸಿ ಪ್ರಮಾಣಪತ್ರವನ್ನು ಅಂಗೀಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.