ಶುಜಲ್ಪುರ/ ಮಧ್ಯಪ್ರದೇಶ: ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ವೈಯಕ್ತಿಕ ದ್ವೇಷ ಹರಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಬಳಿಕ ಅವರು ನೀಡಿದ ಸಂದರ್ಶನದಲ್ಲಿ ಮಾತನಾಡಿದರು.
ನಮ್ಮ ರಾಷ್ಟ್ರ ಪ್ರೀತಿ, ವಾತ್ಸಲ್ಯದ ನಾಡು. ಇದರಲ್ಲಿ ಮೋದಿ ವೈಯಕ್ತಿಕ ವೈರತ್ವ ಬೆಳೆಸುತ್ತಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ನಾನು ಅವರನ್ನು ಪ್ರೀತಿ, ಗೌರವದಿಂದಲೇ ಮಾತನಾಡುತ್ತೇನೆ. ಆದರೆ ನನ್ನ ಯಾವ ಮಾತಿಗೂ ಅವರು ಪ್ರತಿಕ್ರಿಯಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅಲ್ಲದೇ ಮೋದಿ ಕೇವಲ ಮೂರು ಗಂಟೆ ಮಾತ್ರ ನಿದ್ದೆ ಮಾಡುವುದಾದರೆ, ಅವರು ನನ್ನೊಂದಿಗೆ ಭ್ರಷ್ಟಾಚಾರ, ಹಣ ಅಪಮೌಲ್ಯೀಕರಣ, ಜಿಎಸ್ಟಿ, ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿ ಎಂದು ಸವಾಲು ಎಸೆದರು.
ಒಬ್ಬ ನಾಯಕ ಯಾವ ರೀತಿ ರಾಷ್ಟ್ರವನ್ನು ಮುನ್ನಡೆಸಬಾರದು ಎಂಬುದನ್ನು ಮೋದಿ ಕಲಿಸಿದ್ದಾರೆ. ಎದುರು ವ್ಯಕ್ತಿಯ ಮಾತನ್ನು ಕೇಳದೆ ರಾಷ್ಟ್ರವನ್ನು ಮುಂದುವರೆಸಿದ್ದೇ ಆದಲ್ಲಿ ಆ ರಾಷ್ಟ್ರ ಸಮರ್ಥವಾಗಿ ಮುಂದುವರೆಯದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೋದಿ ಅವರ ಸಂವಹನ ಕಲೆಗೆ ಯಾರು ಸರಿಸಮಾನರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಐದು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭಾವಿಸಿದ್ದರು. ಆದರೂ ನಾವು ಹಿಂಜರಿಯದೆ ಪ್ರತಿ ಕ್ಷಣವೂ ಹೋರಾಡಿದೆವು. ಈಗ ಅವರಲ್ಲಿ ಭಯ ಹುಟ್ಟಿದೆ ಎಂದು ಹೇಳಿದರು.