ನವದೆಹಲಿ: ಕೇಂದ್ರ ಸರ್ಕಾರವು ಸೇನಾ ವ್ಯವಹಾರಗಳ ಇಲಾಖೆಯನ್ನು ಸೃಷ್ಟಿಸಿದ್ದು, ‘ರಕ್ಷಣಾ ಪಡೆಗಳ ಮುಖ್ಯಸ್ಥ’ರೇ (ಸಿಡಿಎಸ್) ಅದಕ್ಕೂ ಮುಖ್ಯಸ್ಥರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಸಿಡಿಎಸ್ ಮುಖ್ಯಸ್ಥರಾಗಿ ನೇಮಕವಾಗಿರುವ ಜನರಲ್ ಬಿಪಿನ್ ರಾವತ್ ಇಲಾಖೆಯ ನೇತೃತ್ವವಹಿಸಲಿದ್ದಾರೆ.
ಹೊಸ ಇಲಾಖೆಯ ವ್ಯಾಪ್ತಿಯಲ್ಲಿ ಭೂ ಸೇನೆ, ವಾಯು ಮತ್ತು ನೌಕಾಪಡೆಯ ನೀತಿ, ಯೋಜನೆ ಮತ್ತು ಖರೀದಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
‘ತಪ್ಪು ನಿರ್ಧಾರ’– ಕಾಂಗ್ರೆಸ್ ಟೀಕೆ: ರಕ್ಷಣಾ ಪಡೆಗಳ ಮುಖ್ಯಸ್ಥರ (ಸಿಡಿಎಸ್) ನೇಮಕವನ್ನು ಪ್ರಶ್ನಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಈ ಮೂಲಕ ತಪ್ಪು ಹೆಜ್ಜೆಯಿಡುತ್ತಿದೆ ಎಂದು ದೂರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಮನಿಷ್ ತಿವಾರಿ, ‘ಸಿಡಿಎಸ್ ನೇಮಿಸುವ ಮೂಲಕ ಸರ್ಕಾರ ತಪ್ಪು ಹೆಜ್ಜೆಯಿಟ್ಟಿದೆ. ಸಮಯವೇ ಅದರ ಪರಿಣಾಮಗಳನ್ನು ಬಹಿರಂಗಪಡಿಸಲಿದೆ’ ಎಂದಿದ್ದಾರೆ.