ನವದೆಹಲಿ: ಜವಾಹರಲಾಲ್ ನೆಹರೂ ವಿ.ವಿ.ಯಲ್ಲಿ (ಜೆಎನ್ಯು) ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ಖಂಡಿಸಿರುವ ವಿ.ವಿ.ಯ ಹಳೆಯ ವಿದ್ಯಾರ್ಥಿ, ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯ ಕುಮಾರ್, ಸರ್ಕಾರವು ಶತ್ರುವನ್ನಾಗಿ ಜೆಎನ್ಯುವನ್ನು ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆ ಎಂದಿದ್ದಾರೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕನ್ಹಯ್ಯ, ಜೆಎನ್ಯು ಯಾವಾಗಲೂ ಸಮಸ್ಯೆಗಳ ಕುರಿತು ಮಾತನಾಡುತ್ತದೆ ಆದರೆ ಅದು ವರದಿಯಾಗುವುದಿಲ್ಲ. ನನ್ನ ವಿಶ್ವವಿದ್ಯಾಲಯ ಯಾವಾಗಲೂ ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತದೆ. ಸರ್ಕಾರವು ಶತ್ರುವನ್ನಾಗಿ ಜೆಎನ್ಯುವನ್ನು ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆ ಎಂದರು.
ಜೆಎನ್ಯು ಮೇಲಿನ ದ್ವೇಷವು ವಿಶ್ವವಿದ್ಯಾಲಯ ಅಥವಾ ಸಿದ್ಧಾಂತದ ಮೇಲಿನ ದ್ವೇಷವಲ್ಲ. ದೇಶವು ಹೇಗಿರಬೇಕು ಎನ್ನುವುದರ ಚಿಂತನೆಯಾಗಿದೆ. ಜೆಎನ್ಯುನಲ್ಲಿ ಒಂದು ಹುಡುಗಿ ಗ್ರಂಥಾಲಯದಿಂದ ಹೊರಬಂದು ಒಂಟಿಯಾಗಿ ನಡೆಯಬಹುದು. ಈ ಕ್ಯಾಂಪಸ್ನ ಶೇ. 40ರಷ್ಟು ಜನರು ಆದಿವಾಸಿ ಅಥವಾ ಬಡ ಕುಟುಂಬಗಳಿಂದ ಬಂದವರು.ತುಕ್ಡೆ ತುಕ್ಡೆ ಗ್ಯಾಂಗ್ನ ನಾಯಕ ಎಂದು ಕರೆಯುವುದನ್ನು ನಾನು ಗೌರವವನ್ನಾಗಿ ಸ್ವೀಕರಿಸುತ್ತೇನೆ. ನೀವು ಜೆಎನ್ಯುನೊಂದಿಗೆ ಇದ್ದರೆ ನಿಮ್ಮನ್ನು ಎಡಪಂಥೀಯರು ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಕನ್ಹಯ್ಯ ಅವರೊಂದಿಗಿದ್ದ ಅದೇ ಕಾಲೇಜಿನ ಹಳೆ ವಿದ್ಯಾರ್ಥಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಮಾತನಾಡಿ, ದಾಳಿಗೊಳಗಾದ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಮೇಲೆ ಎಫ್ಐಆರ್ ದಾಖಲಿಸಿರುವುದು ಏಕೆ ಎಂಬುದನ್ನು ತಿಳಿಯಲು ಬಯಸುತ್ತೇನೆ.
ರಾಷ್ಟ್ರ ವಿರೋಧಿ ನಡೆ ಕಂಡುಬಂದರೂ ಕೂಡ ನಾವು ಸಂವಿಧಾನವನ್ನು ರಕ್ಷಿಸಿಕೊಳ್ಳುತ್ತೇವೆ. ಆದರೆ ಸರ್ಕಾರ ಯಾವಾಗಲೂ ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.