ನವದೆಹಲಿ: ಗೂಢಾಚಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಜೈಲುಗಳಲ್ಲಿ ಆರು ವರ್ಷ ಬಂಧಿಯಾಗಿದ್ದ ಮುಂಬೈ ಎಂಜಿನಿಯರ್ ಹಮೀದ್ ಅನ್ಸಾರಿ(33) ಭಾರತಕ್ಕೆ ಮರಳಿದ್ದಾರೆ. ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ರನ್ನು ಭೇಟಿ ಮಾಡಿದ ಅನ್ಸಾರಿ ಕೈಹಿಡಿದು ಕಣ್ಣೀರಿಟ್ಟರು.
ಮಗನ ಜತೆಯಲ್ಲಿದ್ದ ತಾಯಿ, 'ಮೇರಾ ಭಾರತ್ ಮಹಾನ್, ಮೇರಾ ಮೇಡಂ ಮಹಾನ್, ಸಬ್ ಮೇಡಂ ನೇ ಹಿ ಕಿಯಾ ಹೈ’ (ಹಿರಿದು ನನ್ನ ಭಾರತ, ನಮ್ಮ ಮೇಡಂ ದೊಡ್ಡವರು, ಎಲ್ಲವನ್ನೂ ಮಾಡಿದ್ದು ಮೇಡಂ ಅವರೇ) ಎಂದು ಸುಷ್ಮಾ ಸ್ಮರಾಜ್ ಅವರನ್ನು ಅಪ್ಪಿಕೊಂಡರು. ಸುಷ್ಮಾ ತಾಯಿ–ಮಗನಿಗೆ ಸಾಂತ್ವನ ಹೇಳಿದರು.
ಪಾಕಿಸ್ತಾನಕ್ಕೆ ಅಕ್ರಮವಾಗಿ ನುಸುಳಿದ ಆರೋಪದ ಮೇಲೆ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹಮೀದ್ ನಿಹಾಲ್ ಅನ್ಸಾರಿಯನ್ನು ಪಾಕಿಸ್ತಾನ ಸೋಮವಾರ ಬಿಡುಗಡೆ ಮಾಡಿದೆ.
ನಕಲಿ ಗುರುತಿನ ಚೀಟಿ ಹೊಂದಿದ್ದ ಮುಂಬೈ ನಿವಾಸಿ ಅನ್ಸಾರಿಯನ್ನು ಪಾಕಿಸ್ತಾನ ಗುಪ್ತದಳ 2012ರಲ್ಲಿ ಬಂಧಿಸಿತ್ತು. 2015ರ ಡಿಸೆಂಬರ್ 15ರಂದು ವಿಚಾರಣೆ ನಡೆಸಿದ ಸೇನಾ ನ್ಯಾಯಾಲಯ ಅವರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು. ಇದೇ ಡಿಸೆಂಬರ್ 15ರಂದು ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ, ಬಿಡುಗಡೆಗೆ ಪೂರಕ ದಾಖಲೆಗಳು ಸಿದ್ಧವಾಗದ ಕಾರಣ ಅವರು ಭಾರತಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.
ಪಾಕಿಸ್ತಾನಕ್ಕೆ ಅಕ್ರಮವಾಗಿ ನುಸುಳಿದ್ದು, ದೇಶ ವಿರೋಧಿ ಚಟುವಟಿಕೆ, ಗೂಢಾಚಾರಿಕೆ, ನಕಲಿ ದಾಖಲೆಗಳ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿತ್ತು. 2012ರ ನವೆಂಬರ್ನಲ್ಲಿ ಉದ್ಯೋಗಕ್ಕಾಗಿ ಕಾಬುಲ್ಗೆ ತೆರಳಿದ್ದ ಅನ್ಸಾರಿ, ನಾಪತ್ತೆಯಾಗಿದ್ದರು.
ಸ್ನೇಹಕ್ಕಾಗಿ ಗಡಿ ದಾಟಿ...
ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದ ಅನ್ಸಾರಿ, ಆಕೆಗೆ ಒತ್ತಾಯ ಪೂರ್ವಕವಾಗಿ ನಡೆಸಲಾಗುತ್ತಿದ್ದ ಮದುವೆಯಿಂದ ರಕ್ಷಿಸಲು ಕೋಹಟ್ಗೆ ತೆರಳಿದ್ದರು. 2012ರ ನವೆಂಬರ್ 12ರಂದು ಜಲಾಲಾಬಾದ್ನಲ್ಲಿ ಅಫ್ಘನಿಸ್ತಾನದ ಗಡಿ ದಾಟಿ ಪಾಕಿಸ್ತಾನದ ಪೇಶಾವರ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಗುಪ್ತಚರ ಅಧಿಕಾರಿಗಳಿಂದ ಅನ್ಸಾರಿ ಬಂಧನವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.