ಪಿಥೋರಗಡ: ಭಾರತ–ಚೀನಾ ಗಡಿಯ ಮುನ್ಸಿಯಾರಿ–ಬುಗ್ದಿಯಾರಿ ಮಾರ್ಗದ ರಸ್ತೆ ಕಾಮಗಾರಿ ಪ್ರಕ್ರಿಯೆಯನ್ನು ಭಾರತ ಚುರುಕುಗೊಳಿಸಿದ್ದು, ಉತ್ತರಾಖಂಡ್ನ ಜೋಹರ್ ಕಣಿವೆಯ ಕಡಿದಾದ ಹಿಮಾಲಯ ಭೂಭಾಗದಲ್ಲಿ ಹೆಲಿಕಾಪ್ಟರ್ಗಳ ಮೂಲಕ ಬೃಹತ್ ಯಂತ್ರಗಳನ್ನು ಇಳಿಸಿದೆ.
2019ರಲ್ಲಿ ಯಂತ್ರಗಳನ್ನು ಕಳುಹಿಸುವ ಯತ್ನ ಫಲ ನೀಡಿರಲಿಲ್ಲ. ಈ ಬಾರಿ ಲಾಸ್ಪಾ ಎಂಬಲ್ಲಿಗೆ ಯಂತ್ರೋಪಕರಣಗಳನ್ನು ತಲುಪಿಸಲಾಗಿದ್ದು, ರಸ್ತೆ ಕಾಮಗಾರಿ ಚುರುಕುಗೊಳುಸುವ ಆಶಾಭಾವ ಮೂಡಿದೆ ಎಂದು ಗಡಿ ರಸ್ತೆಗಳ ಸಂಸ್ಥೆಯ (ಬಿಆರ್ಒ) ಮುಖ್ಯ ಎಂಜಿನಿಯರ್ ಬಿಮಲ್ ಗೋಸ್ವಾಮಿ ಹೇಳಿದ್ದಾರೆ.
ಬೃಹತ್ ಕಲ್ಲು ಕತ್ತರಿಸುವ ಯಂತ್ರದ ಕೊರತೆಯಿಂದಾಗಿ 65 ಕಿಲೋ ಮೀಟರ್ ಉದ್ದದ ರಸ್ತೆ ಕಾಮಗಾರಿ ವಿಳಂಬವಾಗಿತ್ತು.
ಮುನ್ಸಿಯಾರಿ–ಬೊಗ್ದಿಯಾರಿ–ಮಿಲಾಮ್ ರಸ್ತೆಯು ಭಾರತ–ಚೀನಾ ಗಡಿಯ ಕೊನೆಯ ಗಡಿಠಾಣೆಗೆ ಸಂಪರ್ಕ ಕಲ್ಪಿಸುತ್ತದೆ.
‘ಯಂತ್ರಗಳನ್ನು ನಿಗದಿತ ಸ್ಥಳಕ್ಕೆ ತಲುಪಿಸುವ ಸವಾಲು ಯಶಸ್ವಿಯಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಗೋಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
₹325 ಕೋಟಿ ವೆಚ್ಚದಲ್ಲಿ 2010ರಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ರಸ್ತೆಯ ಎರಡೂ ತುದಿಯ ಕಾಮಗಾರಿ ಪೂರ್ಣಗೊಂಡಿದ್ದು, ಮಧ್ಯಭಾಗದಲ್ಲಿರುವ 22 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಬಲಿಷ್ಠ ಬಂಡೆಯನ್ನು ಒಡೆಯುವ ಕೆಲಸ ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.