ಮುಂಬೈ: ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆಯು ದಾಳಿ ನಡೆಸಿದ ಬೆನ್ನಲ್ಲೇ ಮುಂಬೈನಲ್ಲಿ ಭಾರಿ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ಶಾಲೆಗಳ ಆಡಳಿತ ಹಾಗೂ ಶಾಲಾ ವಾಹನಗಳ ಮಾಲೀಕರುಗಳು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಮಕ್ಕಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಸೂಚನೆ ನೀಡಿದೆ.
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ನಗರದ ಎಲ್ಲ ಭಾಗಗಳಲ್ಲಿ ರಕ್ಷಣೆಯನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳುವಂತೆ ಶಾಸಕರುಗಳಿಗೂ ಕರೆ ನೀಡಿದ್ದಾರೆ.
ಗುಪ್ತಚರ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಸಲಹೆ ನೀಡಿದ ಬಳಿಕ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಮತ್ತಿತರೆ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತಷ್ಟು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಪಾಕಿಸ್ತಾನದ ಬಲಾಕೋಟ್ನಲ್ಲಿರುವ ಜೈಷ್–ಎ–ಮೊಹಮದ್ ಉಗ್ರ ಸಂಘಟನೆಯ ನೆಲೆಗಳನ್ನು ಗುರಿಯಾಗಿರಿಸಿದ್ದ ವಾಯುಪಡೆಯು ಮಂಗಳವಾರ ಬೆಳಗ್ಗಿನ ಜಾವ 3.45ಕ್ಕೆ ಅತ್ಯಂತ ಚುರುಕು ಮತ್ತು ನಿಖರ ದಾಳಿ ಸಂಘಟಿಸಿತ್ತು. ಈ ವೇಳೆ 350ಕ್ಕೂ ಹೆಚ್ಚು ಉಗ್ರರು ನಿರ್ನಾಮವಾಗಿದ್ದರು.