ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮದಲ್ಲಿ ಉಗ್ರರ ದಾಳಿಗೆ 40 ಯೋಧರು ಹುತಾತ್ಮ

Last Updated 14 ಫೆಬ್ರುವರಿ 2019, 15:43 IST
ಅಕ್ಷರ ಗಾತ್ರ

ಶ್ರೀನಗರ:ಜಮ್ಮು ಕಾಶ್ಮೀರದ ಪುಲ್ವಾಮದ ಅವಂತಿಪುರದಲ್ಲಿ ಗುರುವಾರ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದಾರೆ.

ಘಟನೆಯಲ್ಲಿ 40 ಯೋಧರು ಹುತಾತ್ಮರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಸಲಹೆಗಾರ ಕೆ.ವಿಜಯ್‌ ಕುಮಾರ್‌ ತಿಳಿಸಿದ್ದಾರೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

ಮಧ್ಯಾಹ್ನ 3.15ಕ್ಕೆ ಉಗ್ರರು ಸುಧಾರಿತ ಬಾಂಬ್‌ ಸ್ಫೋಟಿಸಿದ್ದಾರೆ. ಉಗ್ರರ ವಿರುದ್ಧ ಭದ್ರತಾಪಡೆ ಪ್ರತಿದಾಳಿ ನಡೆಸಿದೆ.

ಪಾಕಿಸ್ತಾನದ ಜೈಷ್‌–ಇ– ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿದೆ.ದಾಳಿಯ ನಡೆಸಿದ್ದಾಗಿ ಸಂಘಟನೆ ಕಾಶ್ಮೀರ ಸುದ್ದಿ ಸಂಸ್ಥೆ ಜಿಎನ್‌ಎಸ್‌ಗೆ ಸಂದೇಶವೊಂದನ್ನು ಕಳುಹಿಸಿದೆ.

ಜಮ್ಮುವಿನಿಂದ ಶ್ರೀನಗರಕ್ಕೆ ಬೆಂಗಾವಲಿನಲ್ಲಿ ತೆರಳುತ್ತಿದ್ದ 70 ವಾಹನಗಳ ಪೈಕಿ ವಾಹನವೊಂದನ್ನು ಸ್ಫೋಟಿಸಿದ್ದಾರೆ. ಈ ವೇಳೆಯೋಧರು ಹುತಾತ್ಮರಾಗಿದ್ದಾರೆ. ಹಲವರು ತೀವ್ರ ಗಾಯಗೊಂಡಿದ್ದಾರೆಎಂದು ಸಿಆರ್‌ಪಿಎಫ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮ ದಾಳಿಯ ಸ್ಥಳಕ್ಕೆ ತೆರಳಿರುವ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.70 ವಾಹನಗಳಲ್ಲಿ 2500 ಸಿಬ್ಬಂದಿ ಇದ್ದರು ಎಂದು ಸಿಆರ್‌ಪಿಎಫ್‌ನ ಡಿಜಿ ಆರ್‌.ಆರ್‌. ಭಟ್ನಾಗರ್‌ ತಿಳಿಸಿದ್ದಾರೆ.

(ದಾಳಿಗೆ ಒಳಗಾದ ವಾಹನ ಸಂಖ್ಯೆ ಎಚ್ಆರ್‌ 49 ಎಫ್‌ 0637– ಈ ವಾಹನದಲ್ಲಿ ಪ್ರಯಾಣಿಸುತ್ತಿದ್ದ 42 ಮಂದಿಯೋಧರ ಪಟ್ಟಿ)

ವಾಹನಕ್ಕೆ ಹಾನಿಯಾಗಿರುವುದು. ಚಿತ್ರ: ಪಿಟಿಐ
ವಾಹನಕ್ಕೆ ಹಾನಿಯಾಗಿರುವುದು. ಚಿತ್ರ: ಪಿಟಿಐ

ಗಡಿ ಭದ್ರತಾ ಪಡೆಯ 28 ಯೋಧರು ಹುತಾತ್ಮರಾದ2004 ದಾಳಿಯ ಬಳಿಕ ನಡೆದ ದೊಡ್ಡ ದಾಳಿ ಇದಾಗಿದೆ.

ಜಮ್ಮು ಕಾಶ್ಮೀರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳದಲ್ಲಿ ಸ್ಫೋಟದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿಆರ್‌ಪಿಎಫ್‌ನ ಐಜಿ ಜುಲ್ಫಿಕರ್‌ ಹಸನ್‌ ತಿಳಿಸಿದ್ದಾರೆ.

ಉಗ್ರು ದಾಳಿ ನಡೆಸಿದ ಸ್ಥಳದಲ್ಲಿ ವಾಹನ ಚೆಲ್ಲಾಪಿಲ್ಲಿಯಾಗಿರುವುದು. ಚಿತ್ರ: ಪಿಟಿಐ
ಉಗ್ರು ದಾಳಿ ನಡೆಸಿದ ಸ್ಥಳದಲ್ಲಿ ವಾಹನ ಚೆಲ್ಲಾಪಿಲ್ಲಿಯಾಗಿರುವುದು. ಚಿತ್ರ: ಪಿಟಿಐ

ಹೀನ ಕೃತ್ಯ ಸಹಿಸಲ್ಲ; ಇಡೀ ದೇಶ ಯೋಧರಿಗೆ ಹೆಗಲು ಕೊಟ್ಟು ನಿಲ್ಲುತ್ತದೆ: ಮೋದಿ
ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆಸಿದ ದಾಳಿಯು ಹೀನ ಕೃತ್ಯ. ಈ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಮ್ಮ ಕಚ್ಚೆದೆಯ ಭದ್ರತಾಪಡೆ ಸಿಬ್ಬಂದಿಯ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಇಡೀ ದೇಶ ಕೆಚ್ಚೆದೆಯ ಯೋಧರು ಮತ್ತು ಅವರ ಕುಟುಂಬಕ್ಕೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಘಟನೆ ಮತ್ತು ಪರಿಸ್ಥಿತಿಯ ಕುರಿತಂತೆ ಗೃಹ ಸಚಿವ ರಾಜನಾಥ ಸಿಂಗ್‌ ಮತ್ತು ಹಿರಿಯ ಅಧಿಕಾರಿಗಳ ಮಾತನಾಡಿದ್ದೇನೆ ಎಂದು ನರೇಂದ್ರ ಮೋದಿ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ನಾಳೆ ಶ್ರೀನಗರಕ್ಕೆ ಗೃಹ ಸಚಿವರಾಜನಾಥ ಸಿಂಗ್‌

ಘಟನೆ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಸಿಆರ್‌ಪಿಎಫ್‌ನ ಡಿಜಿ ಆರ್‌.ಆರ್‌. ಭಟ್ನಾಗರ್‌ ಹಾಗೂ ಜಮ್ಮು ಕಾಶ್ಮೀರ ರಾಜ್ಯಪಾಲರಿಂದಮಾಹಿತಿಪಡೆದಿದ್ದಾರೆ.

ಪಟ್ನಾದಲ್ಲಿ ನಾಳೆ(ಶುಕ್ರವಾರ) ನಡೆಯುಬೇಕಿದ್ದ ತಮ್ಮ ರ‍್ಯಾಲಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವರಾಜನಾಥ ಅವರು ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಜಮ್ಮು ಕಾಶ್ಮೀರ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ರಾಜಭವನದ ವಕ್ತಾರರು ತಿಳಿಸಿದ್ದಾರೆ.

ಉಗ್ರರಿಗೆ ಮರೆಯಲಾಗದ ಪಾಠ ಕಲಿಸುತ್ತೇವೆ: ಅರುಣ್‌ ಜೇಟ್ಲಿ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿ ಹೇಡಿತನದ್ದು ಹಾಗೂ ಖಂಡನೀಯವಾದುದು. ಇಡೀ ದೇಶ ಹುತಾತ್ಮರಿಗೆ ನಮಿಸುತ್ತದೆ ಮತ್ತು ಹುತಾತ್ಮರ ಕುಟುಂಬದೊಟ್ಟಿಗೆ ನಿಲ್ಲುತ್ತದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹೇಳಿರುವ ಹಣಕಾಸು ಸಚಿವ ಅರುಣ್‌ ಜೇಟ್ಲಿ, ‘ಘೋರ ಕೃತ್ಯ ನಡೆಸಿದ ಉಗ್ರರಿಗೆ ಎಂದೂ ಮರೆಯಲಾಗದ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ದಾಳಿಗೆ ಪಿಡಿಪಿ ಮುಖ್ಯಸ್ಥೆ,ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು, 12 ಯೋಧರು ಹುತಾತ್ಮರಾಗಿ, ಹಲವರು ಗಾಯಗೊಂಡಿರುವ ಸುದ್ದಿ ತಿಳಿದು ಆಘಾತವಾಯಿತು. ದಾಳಿ ಅತ್ಯಂತಖಂಡನೀಯ ಎಂದು ಹೇಳಿದ್ದಾರೆ.

ಉಗ್ರರ ದಾಳಿಗೆ ನ್ಯಾಷನಲ್‌ ಕಾನ್ಫರೆನ್ಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT