ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲಿ ಮೋದಿ ವಿರೋಧಿ ಅಲೆ ಇದೆ: ಕನಿಮೊಳಿ

Last Updated 2 ಏಪ್ರಿಲ್ 2019, 1:43 IST
ಅಕ್ಷರ ಗಾತ್ರ

ಇದೇ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಡಿಎಂಕೆ ನಾಯಕಿ, ಕರುಣಾನಿಧಿ ಅವರ ಪುತ್ರಿ ಕನಿಮೊಳಿ, ‘ಈ ಬಾರಿ ನಮ್ಮ ಮೈತ್ರಿಕೂಟ ಬಿಜೆಪಿಯನ್ನು ದೂಳೀಪಟ ಮಾಡಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ. ತೂತ್ತುಕುಡಿಯಲ್ಲಿ ಚುನಾವಣಾ ಪ್ರಚಾರದ ಮಧ್ಯೆ ‘ಪ್ರಜಾವಾಣಿ’ ಜೊತೆ ಮಾತುಕತೆ ನಡೆಸಿದ ಕನಿಮೊಳಿ, ಎಐಎಡಿಎಂಕೆ ಮಾತ್ರವಲ್ಲ, ಬಿಜೆಪಿಯ ವಿರುದ್ಧವೂ ಹರಿಹಾಯ್ದರು. ಅವರ ಜೊತೆ ನಡೆಸಿದ ಮಾತುಕತೆ ಇಲ್ಲಿದೆ.

* 12 ವರ್ಷಗಳ ಕಾಲ ನೀವು ರಾಜ್ಯಸಭೆಯ ಸದಸ್ಯರಾಗಿದ್ದಿರಿ. ಈಗ ಚುನಾವಣೆ ಎದುರಿಸಲು ಮುಂದಾದದ್ದು ಯಾಕೆ?

ರಾಜ್ಯಸಭೆಯ ಸದಸ್ಯೆಯಾಗಿ, ಪಕ್ಷದ ಕಾರ್ಯಕರ್ತೆಯಾಗಿ ನಾನು ಜನರ ಜೊತೆ ಬೆರೆತಿದ್ದೇನೆ. ಆದರೆ, ಒಂದು ಕ್ಷೇತ್ರದಲ್ಲಿ ಕೆಲಸ ಮಾಡುವುದು ಮತ್ತು ಜನರಿಂದ ನೇರವಾಗಿ ಆಯ್ಕೆಯಾಗುವುದರಿಂದ ರಾಜಕೀಯದಲ್ಲಿ ಇನ್ನಷ್ಟು ತೀವ್ರವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಜನಪರ ಕೆಲಸಗಳನ್ನು ಮಾಡುತ್ತಾ ಅವರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಭಾವನೆ.

* ತೂತ್ತುಕುಡಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ವಿಶೇಷ ಕಾರಣವೇನಾದರೂ ಇದೆಯೇ? ಅಥವಾ ಈ ಪ್ರದೇಶದಲ್ಲಿ ನಿಮ್ಮ ತಾಯಿಯ ಸಮುದಾಯಕ್ಕೆ (ನಾಡಾರ್‌) ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಕಾರಣವೇ?

ಜಾತಿ ಕಾರಣಕ್ಕೆ ನಾನು ಈ ಕ್ಷೇತ್ರ ಆಯ್ದುಕೊಂಡೆ ಎಂದು ಕೆಲವರು ವಾದಿಸುತ್ತಾರೆ. ಇನ್ನೊಂದೆಡೆ, ನಾನು ನಾಡಾರ್‌ ಸಮುದಾಯಕ್ಕೆ ಸೇರಿದವಳಲ್ಲ ಎಂದುಬಿಜೆಪಿಯ ಅಭ್ಯರ್ಥಿ ಡಾ. ತಮಿಳ್‌ಸಾಯಿ ಸೌಂದರರಾಜನ್‌ ಅವರು ಹೇಳುತ್ತಿದ್ದಾರೆ. ನಾನು ತಮಿಳುನಾಡಿನ ಮಹಿಳೆ. ಅಭಿವೃದ್ಧಿಯ ವಿಚಾರ ಮುಂದಿಟ್ಟು ಮತಯಾಚಿಸುತ್ತೇನೆ. ‘ನಾನು ನಿಮಗಾಗಿ ಕೆಲಸ ಮಾಡುತ್ತೇನೆ’ ಎಂದಷ್ಟೇ ತೂತ್ತುಕುಡಿಯ ಜನರಿಗೆ ಭರವಸೆ ನೀಡುತ್ತೇನೆ.

* ತಮಿಳುನಾಡಿನಲ್ಲಿ ಡಿಎಂಕೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಒಂದು ವೇಳೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಡಿಎಂಕೆಗೆ ಉತ್ತಮ ಜವಾಬ್ದಾರಿ ಸಿಗಬಹುದೇ?

ತಮಿಳುನಾಡಿನಲ್ಲಿ ಮೋದಿ ವಿರೋಧಿ ಅಲೆ ಇದೆ. ಎಂ.ಕೆ. ಸ್ಟಾಲಿನ್ ಅವರ ಸಮಾರಂಭಗಳಿಗೆ ಜನರು ದೊಡ್ಡ ಮಟ್ಟದಲ್ಲಿ ಸೇರುತ್ತಿರುವುದು ಜನರ ಭಾವನೆಯನ್ನು ಸೂಚಿಸುತ್ತದೆ. ಪುದುಚೇರಿ ಸೇರಿದಂತೆ ರಾಜ್ಯದ ಎಲ್ಲ 40 ಕ್ಷೇತ್ರಗಳಲ್ಲಿಯೂ ಪಕ್ಷ ಗೆಲ್ಲುವ ವಿಶ್ವಾಸವಿದೆ. ಅಧಿಕಾರದಲ್ಲಿರಬೇಕು ಎಂಬ ಏಕೈಕ ಕಾರಣಕ್ಕಾಗಿ ಆಡಳಿತಾರೂಢ ಎಐಎಡಿಎಂಕೆ ಜನರ ನಂಬಿಕೆಯನ್ನು ಕಳೆದುಕೊಂಡಿದೆ. ಬಿಜೆಪಿಯು ತಮಿಳು ವಿರೋಧಿ ಪಕ್ಷ. ಅದು ನಮ್ಮ ಸಂಸ್ಕೃತಿ ಮತ್ತು ಜನರಿಗೆ ಗೌರವವನ್ನೇ ನೀಡುವುದಿಲ್ಲ.

* 2–ಜಿ ಹಗರಣದಲ್ಲಿ ನೀವು ವಿಶೇಷ ನ್ಯಾಯಾಲಯದಿಂದ ದೋಷಮುಕ್ತರಾಗಿದ್ದೀರಿ. ಆದರೆ ಪ್ರತಿಪಕ್ಷಗಳು ಈಗಲೂ ಈ ವಿಷಯವನ್ನು ಪ್ರಸ್ತಾಪಿಸುತ್ತಿವೆ...

ತನಿಖಾ ಸಂಸ್ಥೆಗಳು ಮೇಲ್ಮನವಿ ಸಲ್ಲಿಸಿದ್ದು, ಅದಿನ್ನೂ ಸ್ವೀಕೃತವಾಗಿಲ್ಲ. ಅರ್ಜಿಯನ್ನು ಓದಲಿರುವ ನ್ಯಾಯಮೂರ್ತಿಗಳಿಗೆ ನನ್ನ ತಪ್ಪಿಲ್ಲ ಎಂಬುದು ಅರ್ಥವಾಗಲಿದೆ. ನನ್ನ ಪ್ರತಿವಾದಿಗಳು ಪ್ರತಿನಿಧಿಸುವ ಪಕ್ಷ ರಫೇಲ್ ಹಗರಣದಲ್ಲಿ ಸಿಲುಕಿದೆ. ಈ ವಿಚಾರದಲ್ಲಿ ತಮಿಳ್‌ಸಾಯಿ ಅವರ ನಿಲುವೇನು? ಅವರ ಮುಖ್ಯಸ್ಥರಾದ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಗುಜರಾತ್‌ ಹತ್ಯಾಕಾಂಡ ನಡೆದಿತ್ತು ಎಂಬುದನ್ನು ಅವರು ಮರೆಯಬಾರದು.

* ಮೋದಿ ಅವರನ್ನು ತಮಿಳುನಾಡು ವಿರೋಧಿ ಎಂದು ಏಕೆ ಹೇಳುತ್ತೀರಿ?

ನಿಜಹೇಳಬೇಕೆಂದರೆ ಮೋದಿ ತಮಿಳುನಾಡು ವಿರೋಧಿ, ದಕ್ಷಿಣ ಭಾರತದ ವಿರೋಧಿ ಕೂಡಾ. ಈ ಭಾಗಕ್ಕೆ ಬಿಜೆಪಿ ಏನು ಕೊಡುಗೆ ನೀಡಿದೆ? ಅದರ ಗಮನ ಏನಿದ್ದರೂ ಗುಜರಾತ್ ಕಡೆಗೆ ಮಾತ್ರ. ದಕ್ಷಿಣ ರಾಜ್ಯಗಳು ಚಂಡಮಾರುತಕ್ಕೆ ಈಡಾದಾಗ ಕೇಂದ್ರ 10ನೇ ಒಂದು ಭಾಗದಷ್ಟು ಹಣವನ್ನೂ ಪರಿಹಾರ ಕಾರ್ಯಕ್ಕೆಂದು ರಾಜ್ಯಗಳಿಗೆ ನೀಡಲಿಲ್ಲ. ಆದರೆ ಅದು ಮುಂಬೈ–ಅಹಮದಾಬಾದ್ ನಡುವೆ ಬುಲೆಟ್ ರೈಲು ಯೋಜನೆಗೆ ₹ 1.1 ಲಕ್ಷ ಕೋಟಿ ಮೀಸಲಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT