ತಿರುವನಂತಪುರ: ಆದಾಯ ತೆರಿಗೆ ವಿನಾಯ್ತಿ ಮನವಿಗೆ ಸಂಬಂಧಿಸಿದಂತೆನಿರ್ಧಾರ ತೆಗೆದುಕೊಳ್ಳಲು ಸುಮಾರು 20 ವರ್ಷತಡಮಾಡಿದ ಕೈಗಾರಿಕೆ ಇಲಾಖೆಯಲೋಪವನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಹೈಕೋರ್ಟ್ ಐಎಎಸ್ ಅಧಿಕಾರಿಯೊಬ್ಬರಿಗೆ100 ಗಿಡಗಳನ್ನು ನೆಡುವಂತೆ ಆದೇಶ ಮಾಡಿದೆ.
‘ಈ ಅವಧಿಯಲ್ಲಿ ಇಲಾಖೆಯ ನಿರ್ದೇಶಕ ಹುದ್ದೆಯಲ್ಲಿದ್ದ ಎಲ್ಲರೂ ತಪ್ಪು ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಅಮಿತ್ ರಾವಲ್,‘ಪ್ರಸ್ತುತ ಈ ಹುದ್ದೆಯಲ್ಲಿರುವಕೆ.ಬಿಜು ಅರಣ್ಯ ಇಲಾಖೆ ಸೂಚಿಸುವ ಸ್ಥಳದಲ್ಲಿ 100 ಗಿಡ ನೆಡಬೇಕು’ ಎಂದು ಆದೇಶಿಸಿದರು.
ರಾಸಾಯನಿಕಗಳ ವಹಿವಾಟು ನಡೆಸುವ ಖಾಸಗಿ ಸಂಸ್ಥೆಯೊಂದು 2001ರಲ್ಲಿ ಆದಾಯ ತೆರಿಗೆ ವಿನಾಯ್ತಿ ಕೋರಿ ಕೈಗಾರಿಕಾಇಲಾಖೆಗೆ ಮನವಿ ಸಲ್ಲಿಸಿತ್ತು. ಇಲಾಖೆ ಈ ಮನವಿಯನ್ನು ತಿರಸ್ಕರಿಸಿತ್ತು. 2003ರಲ್ಲಿ ಈ ಸಂಬಂಧ ಹೈಕೋರ್ಟ್ನಲ್ಲಿ ಕಂಪನಿಯು ಅರ್ಜಿ ಸಲ್ಲಿಸಿತ್ತು. ಕಂಪನಿಯ ಅಹವಾಲು ಆಲಿಸುವಂತೆ ಹೈಕೋರ್ಟ್ ಕೈಗಾರಿಕಾ ಇಲಾಖೆಗೆ ಸೂಚಿಸಿತ್ತು.
ಹಲವು ವಿಚಾರಣೆಗಳ ನಂತರವೂ ಕೈಗಾರಿಕಾ ಇಲಾಖೆ ಈ ಸಂಬಂಧ ನಿರ್ಧಾರ ತೆಗೆದುಕೊಂಡಿರಲಿಲ್ಲ. ಖಾಸಗಿ ಕಂಪನಿಯು ಮತ್ತೊಮ್ಮೆ ಹೈಕೋರ್ಟ್ಗೆ ಮನವಿ ಸಲ್ಲಿಸಿತು. ವಿಚಾರಣೆ ನಡೆಸಿದ ನ್ಯಾಯಾಲಯವು, ಕರ್ತವ್ಯಲೋಪಕ್ಕಾಗಿ ಅಧಿಕಾರಿಗೆಅಪರೂಪದ ಶಿಕ್ಷೆ ವಿಧಿಸಿತು.
ಐಎಎಸ್ ಅಧಿಕಾರಿ ಬಿಜು,ಕೇರಳ ಸರ್ಕಾರದಲ್ಲಿ ನೀರಾವರಿ ಸಚಿವರಾಗಿರುವ ಕೆ.ಕೃಷ್ಣಮೂರ್ತಿ ಅವರ ಮಗನೂ ಹೌದು.ಮಧ್ಯ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕೃಷ್ಣಮೂರ್ತಿ ಜನಪ್ರಿಯ ರೈತರಾಗಿದ್ದಾರೆ.