ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಇಬ್ಬರು ಮೃತಪಟ್ಟಿದ್ದು, ತಮಿಳುನಾಡಿನ ಮೂವರು ಸೇರಿದಂತೆ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.ಕಾಸರಗೂಡು ಜಿಲ್ಲೆಯ ಕೂಡ್ಲುವಿನಲ್ಲಿ ಶನಿವಾರದವರೆಗೆ 30 ಸೆಂ.ಮೀ ಮಳೆ ದಾಖಲಾಗಿದೆ.
ಇಡುಕ್ಕಿ ಜಿಲ್ಲೆಯಕೊನ್ನತ್ತಡಿ ಗ್ರಾಮದಲ್ಲಿ ಶನಿವಾರ ಸಣ್ಣ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು,ಬೆಳೆ ನಷ್ಟವಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮೀನುಗಾರಿಕೆಗೆ ಹೋಗಿದ್ದ ಕೋಶಿ ವರ್ಗೀಸ್ (53) ಅವರು ತಿರುವಲ್ಲ ಬಳಿಯ ಮಣಿಮಲ ನದಿಗೆ ಜಾರಿ ಮೃತಪಟ್ಟಿದ್ದಾರೆ.ಕೊಲ್ಲಂನಲ್ಲಿ ತೆಂಗಿನ ಮರ ಬಿದ್ದುದಿಲೀಪ್ ಕುಮಾರ್ (54) ಎಂಬುವರು ಸತ್ತಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಮೂಲಗಳು ತಿಳಿಸಿವೆ.
ಕೊಲ್ಲಂನ ನೀಂದಕರದಿಂದ ಸಮುದ್ರಕ್ಕೆ ಹೊರಟಿದ್ದ ತಮಿಳುನಾಡಿನ ಮೂವರು ಮೀನುಗಾರರು ಕಾಣೆಯಾಗಿದ್ದಾರೆ. ಅವರ ದೋಣಿಯಲ್ಲಿದ್ದ ಇತರ ಇಬ್ಬರು ಈಜಿ ಯಶಸ್ವಿಯಾಗಿ ದಡ ಸೇರಿದ್ದಾರೆ. ಫೋರ್ಟ್ ಕೊಚ್ಚಿ ಬೀಚ್ನಲ್ಲಿ ವ್ಯಕ್ತಿಯೊಬ್ಬರು ಕಾಣೆಯಾಗಿದ್ದಾರೆ.
ದೆಹಲಿಯ ಕೆಲವೆಡೆ ಮಳೆ
ದೇಶದ ರಾಜಧಾನಿ ದೆಹಲಿಯ ಕೆಲವೆಡೆ ಶನಿವಾರ ಮಳೆಯಾಗಿದ್ದು, ತಾಪಮಾನ ಇಳಿಕೆಯಾಗಿದೆ.ಒಣ ಹವೆಯಿಂದ ಕಂಗಾಲಾಗಿದ್ದ ರಾಜಧಾನಿಯ ಜನರೀಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.