ತಿರುವನಂತಪುರ: ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯನ್ನು ಕೇರಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ತ್ರಿವಳಿ ತಲಾಖ್ ನಿಷೇಧಿಸುವ ಮತ್ತು ತ್ರಿವಳಿ ತಲಾಖ್ ನೀಡುವ ಪುರುಷನಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳು) ಮಸೂದೆ ಅನ್ವಯ ತ್ರಿವಳಿ ತಲಾಖ್ ನೀಡಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸಂಸತ್ತಿನ ಉಭಯ ಸದನಗಳಲ್ಲಿತ್ರಿವಳಿ ತಲಾಖ್ ನಿಷೇಧಿಸುವ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳು) ಮಸೂದೆ–2019 ಅಂಗೀಕಾರವಾದ ಬಳಿಕ ದಕ್ಷಿಣ ಭಾರತದಲ್ಲಿ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ.
ಕೋಯಿಕ್ಕೋಡ್ನ ಮುಕ್ಕೊಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪತ್ನಿಗೆ ತಲಾಖ್ ನೀಡಿದ್ದ ಇಕೆ ಹುಸಾಂ ಎಂಬ ವ್ಯಕ್ತಿಯ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಕೆ ಹುಸಾಂ ಆಗಸ್ಟ್ 1ರಂದು ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದರು. ಈ ಸಂಬಂಧ ಹುಸಾಂ ಪತ್ನಿಯ ಕುಟುಂಬದವರು ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿಯನ್ನುಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಸೂದೆಯ ಮುಖ್ಯಾಂಶಗಳು
* ತ್ರಿವಳಿ ತಲಾಖ್ ನೀಡುವುದು ಅಪರಾಧ. ತ್ರಿವಳಿ ತಲಾಖ್ ನೀಡಿದ ಸಂಬಂಧ ಸಂತ್ರಸ್ತ ಮಹಿಳೆ ಅಥವಾ ಆಕೆಯ ರಕ್ತಸಂಬಂಧಿಗಳು ದೂರು ನೀಡಿದರೆ ಮಾತ್ರ ಪ್ರಕರಣ ಮಾನ್ಯವಾಗುತ್ತದೆ
* ತ್ರಿವಳಿ ತಲಾಖ್ ನೀಡುವ ಪುರುಷನಿಗೆ ಮೂರು ವರ್ಷ ಜೈಲು ಶಿಕ್ಷೆ. ಆ ಪುರುಷನಿಗೆ ಜಾಮೀನು ಕೊಡಬಹುದು. ಆದರೆ ಸಂತ್ರಸ್ತ ಮಹಿಳೆಯ ಜತೆ ಸಮಾಲೋಚನೆ ನಡೆಸಿದ ನಂತರವಷ್ಟೇ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಬಹುದು
* ಸಂತ್ರಸ್ತ ಮಹಿಳೆಯು ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಪರಿಹಾರ ಅಥವಾ ಭತ್ಯೆಯ ಮೊತ್ತವನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸುತ್ತಾರೆ
* ದಂಪತಿಯು ರಾಜಿ ಆಗುವುದಾದರೆ, ನಿಖಾ ಹಲಾಲ್ (ಮಹಿಳೆಯು ಬೇರೆ ಪುರುಷನೊಂದಿಗೆ ಮದುವೆಯಾಗಿ, ಆತನಿಂದ ವಿಚ್ಛೇದನ ಪಡೆದು, ಮೊದಲ ಪತಿಯೊಂದಿಗೆ ಮರುಮದುವೆ) ಇಲ್ಲದೆಯೇ ರಾಜಿಗೆ ಅವಕಾಶ