ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಚಿಂತಕ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಏಪ್ರಿಲ್ 18ರವರೆಗೆ ಎನ್ಐಎ ವಶಕ್ಕೆ

Last Updated 14 ಏಪ್ರಿಲ್ 2020, 14:00 IST
ಅಕ್ಷರ ಗಾತ್ರ

ಮುಂಬೈ: ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ದಲಿತ ಚಿಂತಕ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಶರಣಾಗಿದ್ದಾರೆ.ಎಲ್ಗಾರ್ ಪರಿಷದ್- ಮಾವೋವಾದಿಗಳೊಂದಿಗಿನ ನಂಟು ಪ್ರಕರಣದಲ್ಲಿ ತೇಲ್ತುಂಬ್ಡೆ ಅವರನ್ನು ಏಪ್ರಿಲ್ 18ರವರೆಗೆ ವಶದಲ್ಲಿರಿಸಲು ವಿಶೇಷ ನ್ಯಾಯಾಲಯಎನ್‍ಐಎಗೆ ಆದೇಶಿಸಿದೆ.

ಭಾರತದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ 129ನೇ ಜನ್ಮದಿನದಂದೇ ತೇಲ್ತುಂಬ್ಡೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.

2018 ಜನವರಿ 1ರಂದು ನಡೆದ ಹಿಂಸಾಚಾರ ಪ್ರಕರಣದಲ್ಲಿ ಎನ್‌ಐಎ 9 ಮಂದಿ ಮಾನವ ಹಕ್ಕು ಹೋರಟಗಾರರನ್ನು ಮತ್ತು ನಾಗರಿಕ ಹಕ್ಕು ಹೋರಾಟಗಾರರನ್ನು ಬಂಧಿಸಿತ್ತು.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ರೀತಿಯಲ್ಲಿಯೇ ಸಿಪಿಐ (ಮಾವೋವಾದಿ) ಸಂಘಟನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಸಂಚು ಹೂಡಿತ್ತು ಎಂಬ ಆರೋಪದ ಬಗ್ಗೆಯೂ ಎನ್‌ಐಎ ತನಿಖೆ ನಡೆಸುತ್ತಿದೆ.

ಅಂಬೇಡ್ಕರ್ ಅವರ ಮೊಮ್ಮಗ, ಮೂರು ಬಾರಿ ಸಂಸದರಾಗಿದ್ದ ವಂಚಿತ್ ಬಹುಜನ್ ಅಘಾಡಿ ಪ್ರಕಾಶ್ ಅಂಬೇಡ್ಕರ್ ಅವರ ಸೋದರ ಮಾವ ಆಗಿದ್ದಾರೆ ತೇಲ್ತುಂಬ್ಡೆ. ಪ್ರೊಫೆಸರ್ ತೇಲ್ತಂಬ್ಡೆ ಅವರ ಕಿರಿಯ ಸಹೋದರ ಮಿಲಿಂದ್ ತೇಲ್ತುಂಬ್ಡೆ ಸಿಪಿಐ (ಮಾವೋವಾದಿ)ಯ ಮಹಾರಾಷ್ಟ್ರ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ. ಇವರು ಹಲವು ವರ್ಷಗಳಿಂದ ಭೂಗತರಾಗಿದ್ದು, ನಕ್ಸಲ್ ಚಟುವಟಿಕೆ ಸಂಬಂಧಿ ಪ್ರಕರಣಗಳಲ್ಲಿ ಪೊಲೀಸರು ಇವರಿಗಾಗಿ ಹುಡುಕಾಡುತ್ತಿದ್ದಾರೆ.

ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಎಲ್ಲ ಸಾಧ್ಯತೆಗಳು ಮುಚ್ಚಿದಾಗ ತೇಲ್ತುಂಬ್ಡೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಪ್ರೊಫೆಸರ್ ತೇಲ್ತುಂಬ್ಡೆ ಅವರು ಕುಂಬಾಲಾ ಹಿಲ್ಸ್‌ನಲ್ಲಿರುವ ಎನ್‌ಐಎ ಕಚೇರಿಗೆ ಹೋಗಿ ಶರಣಾಗಿದ್ದಾರೆ.ಅವರ ಜತೆ ಪತ್ನಿ ರಮಾ ಮತ್ತು ಪ್ರಕಾಶ್ ಅಂಬೇಡ್ಕರ್ ಇದ್ದರು

ಸುಪ್ರೀಂಕೋರ್ಟ್‌ನ ನಿರ್ದೇಶನದ ಅನುಸಾರ ಪ್ರೊಫೆಸರ್ ತೇಲ್ತುಂಬ್ಡೆ ಎನ್‌ಐಎ ಮುಂದೆ ಶರಣಾಗಿದ್ದಾರೆ ಎಂದು ಅವರ ವಕೀಲ ಮಿಹಿರ್ ದೇಸಾಯಿ ಹೇಳಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಪಿಪಿಎ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರೊಫೆಸರ್ ತೇಲ್ತುಂಬ್ಡೆ ಅವರು ವಿಶ್ವೇಶ್ವರಯ್ಯ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ, ಐಐಎಂ ಅಹಮದಾಬಾದ್‌ನಿಂದ ಎಂಬಿಎ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಸೈಬರ್‌ನೆಟಿಕ್ ಮಾಡೆಲಿಂಗ್‌ನಲ್ಲಿ ಇವರು ಪಿಎಚ್‌ಡಿ ಪಡೆದಿದ್ದಾರೆ.

ಪ್ರೊಫೆಸರ್ ತೇಲ್ತುಂಬ್ಡೆ ಅವರು ಭಾರತ್ ಪೆಟ್ರೋಲಿಯಂ ಸಂಸ್ಥೆಯಲ್ಲಿ ಹಿರಿಯ ಕಾರ್ಯನಿರ್ವಾಹಕ ಮತ್ತು ಪೆಟ್ರೊನೆಟ್ ಇಂಡಿಯಾ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ಖರಗ್‌ಪುರ್ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದು ಆನಂತರ ಗೋವಾ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಹಿರಿಯ ಪ್ರೊಫೆಸರ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT