ನವದೆಹಲಿ: ನರೇಂದ್ರ ಮೋದಿ ಅವರು ಮುಂದಿನ ಬಾರಿಯೂ ಪ್ರಧಾನಿಯಾಗಲಿ ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಹಾರೈಸಿದ್ದಾರೆ.
16ನೇ ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ಅವರ ಈ ಮಾತು ಕೇಳಿದ ವಿರೋಧ ಪಕ್ಷಗಳ ಸದಸ್ಯರಿಗೆ ಅಚ್ಚರಿಯಾಯಿತು. ಆಡಳಿತ ಪಕ್ಷದ ಸದಸ್ಯರು ಮುಲಾಯಂ ಅವರ ಮಾತಿಗೆ ಮೇಜು ತಟ್ಟಿ ಸ್ವಾಗತಿಸಿದರು. ‘ಜೈ ಶ್ರೀರಾಮ್’ ಎಂಬ ಘೋಷಣೆಕೂಗಿದರು. ಮೋದಿ ಕೈಮುಗಿದು ನಮಿಸಿದರು.
‘ಎಲ್ಲರನ್ನೂ ಜೊತೆಗೆ ಕರೆದೊಯ್ದ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಪ್ರಧಾನಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ’ ಎಂದ ಅವರು, ಸದನದ ಎಲ್ಲ ಸದಸ್ಯರೂ ಮತ್ತೊಮ್ಮೆ ಆರಿಸಿ ಬರಲಿ’ ಎಂದು ಆಶಯ ವ್ಯಕ್ತಪಡಿಸಿದರು.
ಮುಲಾಯಂ ಮಾತಿಗೆ ಪ್ರತಿಕ್ರಿಯಿಸಿದ ಪ್ರಧಾನಿ, ‘ಮಾಡಬೇಕಾದ ಕೆಲಸಗಳು ಇನ್ನಷ್ಟು ಇವೆ. ಮುಲಾಯಂ ಅವರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಧನ್ಯವಾದ’ ಎಂದು ಹೇಳಿದರು.