ಮುಂಬೈ: ‘ಮಿನಿ’ ಧಾರಾವಿ ಎಂದೇ ಜನಪ್ರಿಯವಾಗಿರುವ ನಲಸೋಪಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಏರುತ್ತಿರುವುದು ಆತಂಕ ಉಂಟುಮಾಡಿದೆ.
ಈವರೆಗೆ ಇಲ್ಲಿ 200 ಮಂದಿ ಸೋಂಕಿಗೆ ಒಳಗಾಗಿದ್ದು, 25 ಮಂದಿ ಮೃತಪಟ್ಟಿದ್ದಾರೆ.
ಐದು ಲಕ್ಷಕ್ಕೂ ಹೆಚ್ಚು ಜನರು ವಾಸಿಸುವ ನಲಸೋಪಾರದ ಪೂರ್ವ ಪ್ರದೇಶಗಳಾದ ಸಂತೋಷ್ ಭುವನ್, ಬಿಲಾಲ್ಪಾಡಾ, ಧವಿನ್ಬಾಗ್, ಶ್ರೀರಾಮ್ ನಗರಗಳನ್ನು ಮತ್ತೊಂದುಧಾರಾವಿ ಎಂದೇ ಕರೆಯಲಾಗುತ್ತದೆ.
ವಲಸೆ ಕಾರ್ಮಿಕರು ಹೆಚ್ಚಿರುವ ಈ ಪ್ರದೇಶದಲ್ಲಿ ಬಹುತೇಕರು ಸಾರ್ವಜನಿಕ ಶೌಚಾಲಯವನ್ನೇ ಬಳಸುತ್ತಾರೆ. ಅಂತರ ಕಾಯ್ದುಕೊಳ್ಳುವುದು ಇಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ.
‘ಆಡಳಿತದ ಅವ್ಯವಸ್ಥೆ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಆಯುಕ್ತರ ನಿರ್ದೇಶನದ ಅನುಸಾರ ಆಯ್ದ ಪ್ರದೇಶಗಳಲ್ಲಿ ಮಾತ್ರವೇ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇಲ್ಲಿಯ ಜನರು ಕೆಲಸದ ಕಾರಣಕ್ಕೆ ಪ್ರತಿದಿನ ಮುಂಬೈಗೆ ಪ್ರಯಾಣಿಸುತ್ತಾರೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಇಲ್ಲಿಯೂ ಧಾರಾವಿಯ ಪರಿಸ್ಥಿತಿಯೇ ಉಂಟಾಗಬಹುದು’ ಎಂದು ಮೇಯರ್ ಪ್ರವೀಣ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.