ನವದೆಹಲಿ: ಕೊರೊನಾ ವೈರಸ್ ಹರಡುವಿಕೆ ತಡೆಯುವುದಕ್ಕಾಗಿ ಏಪ್ರಿಲ್ 14ರವರೆಗೆ ದೇಶವಿಡೀ ಲಾಕ್ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಜನರಿಗೆ ಅಗತ್ಯ ವಸ್ತುಗಳ ಲಭ್ಯತೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇ ಕಾಮರ್ಸ್ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಜನರಿಗೆ ವಸ್ತುಗಳ ಲಭ್ಯತೆ ಇಳಿಮುಖವಾಗಿದೆ ಎಂದು ಲೋಕಲ್ ಸರ್ಕಲ್ಸ್ ಸಾಮಾಜಿಕ ಮಾಧ್ಯಮ ವೇದಿಕಯು ನಡೆಸಿದ ಸಮೀಕ್ಷೆ ಹೇಳಿದೆ.
ಅಗತ್ಯ ವಸ್ತುಗಳ ಲಭ್ಯತೆ ಕೊರತೆಪ್ರಮಾಣವು ಶೇ 35ರಿಂದ ಶೇ 79ಕ್ಕೆ ಏರಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಚಿಲ್ಲರೆ ಅಂಗಡಿಗಳಲ್ಲಿ ಅಗತ್ಯ ವಸ್ತು ಖರೀದಿ ಸಾಧ್ಯವಾಗಿಲ್ಲ ಎಂದು ಹೇಳಿರುವವರ ಪ್ರಮಾಣವು ಕಳೆದ ಕೆಲವು ದಿನಗಳಲ್ಲಿ ಶೆ 17ರಿಂದ ಶೇ 32ಕ್ಕೆ ಏರಿದೆ.
ಇ–ಕಾಮರ್ಸ್ ಮೂಲಕ ಕಿರಾಣಿ ವಸ್ತುಗಳು ಅಥವಾ ಇತರ ವಸ್ತುಗಳಿಗೆ ಆರ್ಡರ್ ಮಾಡಿದವರಿಗೆ ಒಂದೋ ಅವು ತಲುಪುತ್ತಿಲ್ಲ ಅಥವಾ ‘ಸ್ಟಾಕ್ ಇಲ್ಲ’ ಎಂಬ ಉತ್ತರ ಬರುತ್ತಿದೆ.
ಅಗತ್ಯ ವಸ್ತುಗಳ ಲಭ್ಯತೆ ಮತ್ತು ಇ–ಕಾಮರ್ಸ್ ಮೂಲಕ ಖರೀದಿ ವಿಚಾರದಲ್ಲಿ ಗ್ರಾಹಕರ ಅನುಭವ ಏನು ಎಂಬ ಸಮೀಕ್ಷೆಯನ್ನು ಲೋಕಲ್ ಸರ್ಕಲ್ಸ್ ನಡೆಸಿದೆ. 164 ಜಿಲ್ಲೆಗಳ 16 ಸಾವಿರಕ್ಕೂ ಹೆಚ್ಚು ಗ್ರಾಹಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ 20–22ರ ಅವಧಿಗೆ ಹೋಲಿಸಿದರೆ, ಕಳೆದ 48 ತಾಸುಗಳಲ್ಲಿ ಅಗತ್ಯ ವಸ್ತುಗಳು ಕೊರತೆಯಾಗಿದೆ ಎಂದು ಹೇಳಿದವರ ಪ್ರಮಾಣವು ಶೇ 35ರಿಂದ ಶೇ 79ಕ್ಕೆ ಏರಿದೆ. ಅಂದರೆ, ಇ–ಕಾಮರ್ಸ್ ಮೂಲಕ ಹೆಚ್ಚಿನ ಜನರಿಗೆ ಅಗತ್ಯ ವಸ್ತುಗಳು ತಲುಪಿಲ್ಲ.
ಇ–ಕಾಮರ್ಸ್ ಮೂಲಕ ಖರೀದಿ ಅನುಭವ
ವಿಳಂಬವಾಗಿ ದೊರೆಯಿತು ಎಂದವರ ಪ್ರಮಾಣ ಶೇ14,ತಮ್ಮ ಆರ್ಡರ್ ರದ್ದು ಮಾಡಲಾಗಿದೆ ಎಂದವರ ಪ್ರಮಾಣ ಶೇ 17, ಆರ್ಡರ್ ಮಾಡಿದ ವಸ್ತುಗಳ ಪೈಕಿ ಸ್ವಲ್ಪ ಮಾತ್ರ ಸಿಕ್ಕಿದೆ ಎಂದವರ ಪ್ರಮಾಣ ಶೇ 21,ಸಕಾಲಕ್ಕೆ ಎಲ್ಲವೂ ಸಿಕ್ಕಿದೆ ಎಂದವರ ಪ್ರಮಾಣ ಶೇ 21.
ಚಿಲ್ಲರೆ ಅಂಗಡಿ ಮೂಲಕ ಖರೀದಿ
ಎಲ್ಲವೂ ಸುಲಭವಾಗಿ ಸಿಕ್ಕಿತು ಎಂದವರ ಪ್ರಮಾಣ ಶೇ 38, ಹೆಚ್ಚಿನ ವಸ್ತುಗಳು ಸಿಕ್ಕಿವೆ ಎಂದವರ ಪ್ರಮಾಣ ಶೇ 30,ಕೆಲವು ವಸ್ತುಗಳು ಸಿಕ್ಕಿವೆ ಎಂದವರ ಪ್ರಮಾಣ ಶೇ 12,ಹೆಚ್ಚಿನ ವಸ್ತುಗಳು ಸಿಕ್ಕಿಲ್ಲ ಎಂದವರ ಪ್ರಮಾಣ ಶೇ 15,ಯಾವ ವಸ್ತುವೂ ಸಿಕ್ಕಿಲ್ಲ ಎಂದವರ ಪ್ರಮಾಣ ಶೇ 5.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.