ಚೆನ್ನೈ:ಉಗ್ರರು ನುಸುಳಿರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಐದು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಗುರುವಾರ ಬೆಳಿಗ್ಗೆ ದಾಳಿ ನಡೆಸಿದೆ.
ತಮಿಳುನಾಡು ಪೊಲೀಸರ ಜತೆ ಜಂಟಿ ದಾಳಿ ನಡೆಸಲಾಗಿದ್ದು ಲ್ಯಾಪ್ಟಾಪ್, ಮೊಬೈಲ್ ಫೋನ್, ಸಿಮ್ ಕಾರ್ಡ್ಗಳು ಮತ್ತು ಪೆನ್ಡ್ರೈವ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದುಎಎನ್ಐಸುದ್ದಿ ಸಂಸ್ಥೆ ವರದಿ ಮಾಡಿದೆ. ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಲಷ್ಕರ್ ಇ ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಯ 6 ಜನರ ತಂಡತಮಿಳುನಾಡಿಗೆ ನುಸುಳಿರುವ ಮಾಹಿತಿ ಇದೆ ಎಂದು ಭಾನುವಾರ (ಆಗಸ್ಟ್ 25ರಂದು) ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿಯ ಉಡುಪಿ, ದಕ್ಷಣ ಕನ್ನಡ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ಘೋಷಿಸಲಾಗಿತ್ತು.
ಜುಲೈನಲ್ಲಿಯೂ ತಮಿಳುನಾಡಿನ ಹಲವೆಡೆ ದಾಳಿ ನಡೆಸಿದ್ದ ಎನ್ಐಎ, ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗುವುದಕ್ಕಾಗಿ ನಿಧಿ ಸಂಗ್ರಹಿಸುತ್ತಿದ್ದ ತಂಡವನ್ನು ಪತ್ತೆ ಮಾಡಿತ್ತು. ನಾಗಪಟ್ಟಣಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿಯೂ ಶೋಧ ನಡೆಸಿತ್ತು.