ಪಟನಾ: ಇತರ ರಾಜ್ಯಗಳಿಂದ ಬಿಹಾರಕ್ಕೆ ವಾಪಸ್ ಬರುತ್ತಿರುವ ವಲಸೆ ಕಾರ್ಮಿಕರಿಗೆ ಇನ್ನು ಮುಂದೆ ಕ್ವಾರಂಟೈನ್ ಸೌಲಭ್ಯಕ್ಕಾಗಿ ನೋಂದಣಿ ಮಾಡಬೇಕಿಲ್ಲ. ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡುವುದನ್ನು ಕೂಡಾ ನಿಲ್ಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಆದಾಗ್ಯೂ,ಎಲ್ಲ ರೈಲು ನಿಲ್ದಾಣಗಳಲ್ಲಿರುವ ವೈದ್ಯಕೀಯ ಸಹಾಯ ತಂಡವು ಅಸ್ವಸ್ಥರಾಗಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುತ್ತಿದೆ.
ಪ್ರಸ್ತುತ ಸರಿಸುಮಾರು 13 ಲಕ್ಷ ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಬಂದಿದ್ದು , 5,000ಕ್ಕಿಂತಲೂ ಹೆಚ್ಚು ಕೇಂದ್ರಗಳಲ್ಲಿ ಇವರನ್ನು ಕ್ವಾರಂಟೈನ್ ಮಾಡಲಾಗಿದೆ.14 ದಿನಗಳ ಕಾಲ ಕ್ವಾರಂಟೈನ್ನಲ್ಲಿರಿಸುವ ಈ ಕೇಂದ್ರಗಳನ್ನು ಮುಚ್ಚಲು ತೀರ್ಮಾನಿಸಿದ್ದು, ಕೊನೆಯ ತಂಡ ಜೂನ್ 15ರಂದು ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಲಿದೆ.
ನಾವು ಸುಮಾರು 30 ಲಕ್ಷ ವಲಸೆ ಕಾರ್ಮಿಕರನ್ನು ವಾಪಸ್ ತರುವ ದೊಡ್ಡ ಮಟ್ಟದ ಕಾರ್ಯಾಚರಣೆ ಮಾಡಿದ್ದೇವೆ. ಸೋಮವಾರ ಸಂಜೆ ನೋಂದಣಿ ಕಾರ್ಯ ಮುಕ್ತಾಯಗೊಳಿಸಿದ್ದೇವೆ. ಬಹುತೇಕ ಮಂದಿ ವಾಪಸ್ ಬಂದಿದ್ದಾರೆ ಎಂದು ಬಿಹಾರದ ವಿಪತ್ತು ನಿರ್ವಹಣೆ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಪ್ರತ್ಯಾಯ ಅಮೃತ್ ಹೇಳಿದ್ದಾರೆ.
ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯ ಹಾಗೆಯೇ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಸೋಂಕು ದೃಢಪಟ್ಟಿರುವ 3 ,872 ರೋಗಿಗಳ ಪೈಕಿ ಶೇ.70ರಷ್ಟು ಪ್ರಕರಣಗಳು ವಲಸೆ ಕಾರ್ಮಿಕರದ್ದಾಗಿದೆ. ಬೇರೆ ರಾಜ್ಯಗಳಿಂದ ವಾಪಸ್ಸಾಗಿರುವ ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರಿಗೆ ಸೋಂಕು ತಗುಲಿದೆ.
ಸೋಂಕು ತಗಲದಂತೆ ಹೋಮ್ ಕ್ವಾರಂಟೈನ್ ಉತ್ತಮ. ಕ್ವಾರಂಟೈನ್ ಕೇಂದ್ರದಲ್ಲಿ ನಾವು ಎಲ್ಲ ಸೌಕರ್ಯಗಳನ್ನು ಒದಗಿಸಿದ್ದೇವೆ. ರೈಲು,ಬಸ್ ಪ್ರಯಾಣದ ಖರ್ಚು ಮತ್ತು ₹1000 ಮೌಲ್ಯದ ಅಗತ್ಯ ವಸ್ತುಗಳ ಕಿಟ್ ಕೂಡಾ ನೀಡಿದ್ದೇವೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.