ನವದೆಹಲಿ: 12ನೇ ತರಗತಿಯ ಬಾಕಿ ವಿಷಯಗಳಿಗೆ ಪರೀಕ್ಷೆ ನಡೆಸುವ ಸಂಬಂಧ ಸಿಬಿಎಸ್ಇ ಹೊರಡಿರುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಲಾಗಿದೆ.
ಕರ್ನಲ್ ಅಮಿತ್ ಬಾತ್ಲಾ ನೇತೃತ್ವದಲ್ಲಿ ಪಾಲಕರ ಗುಂಪೊಂದು ಪಿಐಎಲ್ ಸಲ್ಲಿಸಿದೆ.
‘ದೇಶದ ವಿವಿಧೆಡೆ 15 ಸಾವಿರ ಪರೀಕ್ಷಾ ಕೇಂದ್ರಗಳಿವೆ. ಕೋವಿಡ್–19 ಹಿನ್ನೆಲೆಯಲ್ಲಿ ಈ ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವುದು, ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಆರೋಗ್ಯದೊಂದಿಗೆ ಚೆಲ್ಲಾಟವಾಡಿದಂತೆ’ ಎಂದು ಅರ್ಜಿದಾರರು ಹೇಳಿದ್ದಾರೆ.
‘ಕೋವಿಡ್–19 ಕಾರಣದಿಂದ ದೆಹಲಿ ವಿಶ್ವವಿದ್ಯಾಲಯ, ಕೆಲವು ಐಐಟಿಗಳು, ಹಲವಾರು ರಾಜ್ಯ ಸರ್ಕಾರಗಳು ಅಂತಿಮ ವರ್ಷದ ಪರೀಕ್ಷೆಗಳನ್ನೇ ರದ್ದುಪಡಿಸಿವೆ. ವಿದೇಶಗಳಲ್ಲಿರುವ 250 ಶಾಲೆಗಳಲ್ಲಿ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ಸ್ವತಃ ಸಿಬಿಎಸ್ಇಯೇ ರದ್ದುಪಡಿಸಿದೆ’ ಎಂದೂ ವಿವರಿಸಿದ್ದಾರೆ.