ಲಖನೌ: ಗೋವುಗಳ ರಕ್ಷಣೆ ಹಾಗೂ ಗೋಹತ್ಯೆ ತಡೆಯುವುದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, ಈಸಂಬಂಧ ರೂಪಿಸಿರುವ ಕರಡು ನಿಯಮಾವಳಿಗೆ ಮಂಗಳವಾರ ಅನುಮೋದನೆ ನೀಡಿದೆ.
ಈ ಸುಗ್ರೀವಾಜ್ಞೆಯ ಪ್ರಕಾರ ಗೋಹತ್ಯೆ ಮಾಡುವವರಿಗೆ ಗರಿಷ್ಠ ಹತ್ತು ವರ್ಷ ಕಠಿಣ ಸಜೆ ಹಾಗೂ ₹5 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ.
ಈ ಅಪರಾಧಕ್ಕೆ ಮೊದಲ ಬಾರಿಗೆ ಒಂದರಿಂದ ಏಳು ವರ್ಷಗಳ ವರೆಗಿನ ಕಠಿಣ ಸಜೆ, ₹1ರಿಂದ ₹3 ಲಕ್ಷದ ವರೆಗೆ ದಂಡ ಹಾಗೂ ಎರಡನೇ ಬಾರಿ 10 ವರ್ಷಗಳ ವರೆಗೆ ಕಠಿಣ ಸಜೆ ಹಾಗೂ ₹5 ಲಕ್ಷ ದಂಡ ವಿಧಿಸಬಹುದಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.