ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಮಟ್ಟದಲ್ಲಿ ವೈಜ್ಞಾನಿಕ ಸಂಶೋಧನೆ ಅಗತ್ಯ–ಮೋದಿ

Last Updated 3 ಜನವರಿ 2019, 16:07 IST
ಅಕ್ಷರ ಗಾತ್ರ

ಜಲಂಧರ್‌:ರಾಜ್ಯ ಸರ್ಕಾರಗಳು ನಡೆಸುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿಐಐಟಿ, ಐಐಎಸ್‌ಸಿ ಮಾದರಿಯಲ್ಲಿ ವಿಜ್ಞಾನದ ಸಂಶೋಧನೆಗಳನ್ನು ಆರಂಭಿಸಲು ಅಗತ್ಯ ಸೌಲಭ್ಯ ಮತ್ತು ಅನುದಾನ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ಇದಕ್ಕಾಗಿ ಪ್ರಧಾನಮಂತ್ರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹಾ ಸಮಿತಿಯು ನೀಲಿ ನಕಾಶೆ ರೂಪಿಸಲಿದೆ ಎಂದು ಅವರು ಬುಧವಾರ 106 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಉದ್ಘಾಟಿಸಿ ಹೇಳಿದರು.

ಇದಕ್ಕಾಗಿ ಮಾನವ ಸಂಪನ್ಮೂಲ ಇಲಾಖೆ ಸದ್ಯವೇ ಕ್ರಿಯಾ ಯೋಜನೆಯನ್ನು ರೂಪಿಸಲಿದೆ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಅತ್ಯುತ್ತಮ ಸಂಶೋಧನೆಗಳು ನಡೆಯುವ ಅಗತ್ಯ ಹಿಂದೆಂದಿಗಿಂತಲೂ ಇಂದು ಅಗತ್ಯ. ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಇದು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಐಐಎಸ್‌ಸಿ, ಐಐಟಿ, ಐಸೆರ್‌ಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಸಂಶೋಧನೆಗಳು ನಡೆಯುತ್ತಿವೆ. ಆದರೆ, ವಿವಿಧ ರಾಜ್ಯ ಸರ್ಕಾರಗಳ ಅನುದಾನದಿಂದ ನಡೆಯುತ್ತಿರುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಂಶೋಧನೆಗಳು ನಡೆಯುತ್ತಿಲ್ಲ. ಹೊಸ ಪ್ರಯತ್ನದಿಂದ ದೇಶದಲ್ಲಿ ವೈಜ್ಞಾನಿಕ ಸಂಶೋಧನೆಯ ತಳಹದಿ ವಿಸ್ತರಣೆಯಾಗಲಿದೆ ಎಂದರು.

ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಒದಗಿಸಲು ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕು. ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಗಂಭೀರ ಸಂಶೋದನೆಗಳಿಗೆ ಒತ್ತು ನೀಡಿದಾಗ ಮಾತ್ರ ಇದು ಸಾಧ್ಯ, ಜತೆಗೆ ಈ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ವೃದ್ಧಿಯಾಗಲು ಒತ್ತು ನೀಡುವುದಾಗಿ ಅವರು ಹೇಳಿದರು.

ಇದಕ್ಕೆ ಸರ್ಕಾರದ ಜತೆಗೆ ಖಾಸಗಿ ಸಹಭಾಗಿತ್ವವನ್ನೂ ಪಡೆಯಲಾಗುವುದು. ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಇರುವ ನೀತಿಯನ್ನು ರೂಪಿಸಲಾಗುವುದು ಎಂದು ಮೋದಿ ಹೇಳಿದರು.

ಕೃಷಿಯಲ್ಲಿ ತಂತ್ರಜ್ಞಾನ

ಕೃಷಿಯಲ್ಲಿ ರೈತ ಕಡಿಮೆ ಖರ್ಚಿನಲ್ಲಿ ಕೃಷಿಯುತ್ಪನ್ನ ಬೆಳೆಯಲು ಅತ್ಯಾಧುನಿಕ ತಂತ್ರಜ್ಞಾನಗಳಾಗಿರುವ ಬಿಗ್ ಡೆಟಾ, ಸೆನ್ಸರ್‌, ಡ್ರೋನ್, ಕೃತಕ ಬುದ್ಧಿಮತ್ತೆಗಳನ್ನು ಬಳಸಬೇಕು. ನವಭಾರತದ ಹೊಸ ಅಗತ್ಯಗಳನ್ನು ಪೂರೈಸಲು ಈ ತಂತ್ರಜ್ಞಾನಗಳನ್ನು ಪ್ಯಾಕೇಜ್‌ ರೀತಿಯಲ್ಲಿ ಬಳಸುವ ಬಗ್ಗೆ ಶ್ರಮಿಸಬೇಕು ಎಂದು ಅವರು ಯುವ ವಿಜ್ಞಾನಿಗಳಿಗೆ ಸಲಹೆ ನೀಡಿದರು.

ದೇಶದಲ್ಲಿ ಸಣ್ಣ ರೈತರ ಸಂಖ್ಯೆ ಅತ್ಯಧಿಕವಿದೆ. ಇವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕಪರಿಹಾರಗಳನ್ನು ಕಂಡುಹಿಡಿಯಬೇಕು. ಕೃಷಿ ಅಲ್ಲದೆ, ಆರೋಗ್ಯ, ಬಡತನ ನಿವಾರಣೆಗಾಗಿ ಬಳಕೆಯಾಗಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಸಂಶೋಧನೆಗಳ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.

ಶಿಕ್ಷಣ ಮತ್ತು ಕೃಷಿ ಕ್ಷೇತ್ರದ ವೈಜ್ಞಾನಿಕ ಸಂಶೋಧನೆಗಳಿಗೆ ಉದ್ಯಮಗಳೂ ನೆರವಿಗೆ ನಿಲ್ಲಬೇಕು. ಆರೋಗ್ಯ ಆರೈಕೆ, ಕುಡಿಯುವ ಶುದ್ಧನೀರು, ಕೃಷಿ ಉತ್ಪನ್ನಗಳು, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟ ಸಾಧಿಸಬೇಕು. ಇದಕ್ಕೆ ಸೂಕ್ತ ಮಾರ್ಗದರ್ಶನ, ನಿರ್ದೇಶನ ಮತ್ತು ಮಾಲಿಕತ್ವದ ಜವಾಬ್ದಾರಿಯನ್ನೂ ಹೊರಬೇಕು ಎಂದು ಮೋದಿ ಉದ್ಯಮಗಳಿಗೆ ಸಲಹೆ ನೀಡಿದರು.

ಜೈವಿಜ್ಞಾನ್‌ ಸಾಲಿಗೆ ಜೈ ಅನುಸಂಧಾನ್

ಲಾಲ್‌ಬಹದ್ದೂರ್‌ ಶಾಸ್ತ್ರಿ ಜೈಜವಾನ್‌– ಜೈಕಿಸಾನ್‌ ಎಂದು ಹೇಳಿದರು. ಪೋಖ್ರನ್‌ನಲ್ಲಿ ಅಣುಸ್ಫೋಟ ನಡೆಸಿದ ಸಂದರ್ಭದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ‘ಜೈವಿಜ್ಞಾನ್‌’ ಎಂದು ಸೇರಿಸಿದರು. ವೈಜ್ಞಾನಿಕ ಸಂಶೋಧನೆ ವ್ಯಾಪಕಗೊಳಿಸಬೇಕಾಗಿರುವ ಕಾರಣ ಇನ್ನೂ ಒಂದು ಹೆಜ್ಜೆ ಮುಂದಿಡಬೇಕಾಗಿದೆ. ಆದ್ದರಿಂದ ‘ಜೈ ಅನುಸಂಧಾನ್‌’ (ಸಂಶೋಧನೆ)ಎಂದು ಸೇರಿಸಲು ಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬರ ನಿರ್ವಹಣೆ, ಕಡಿಮೆ ಮಳೆ ಪ್ರದೇಶದ ಸಮಸ್ಯಗಳಿಗೆ ಸ್ಪಂದಿಸಿ: ವಿಜ್ಞಾನಿಗಳಿಗೆ ಮೋದಿ ತಾಕೀತು

ಬರ ನಿರ್ವಹಣೆ ಮತ್ತು ಕಡಿಮೆ ಮಳೆ ಪ್ರದೇಶದ ಸಮಸ್ಯಗಳಿಗೆ ಸ್ಪಂದಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಜ್ಞಾನಿಗಳಿಗೆ ತಾಕೀತು ಮಾಡಿದರು. ಜನರ ನಡುವೆ ಇದ್ದು, ಬೆರೆತು ಅವರವ ದೈನಂದಿನ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ವಿಜ್ಞಾನಿಗಳು ಜನರ ಜೀವನ ಇನ್ನಷ್ಟು ಸರಳ ಮತ್ತು ಸುಗಮವಾಗುವ ನಿಟ್ಟಿನಲ್ಲಿ ಶ್ರಮಿಸಬೇಕು. ಬಿಗ್ ಡೇಟಾ ಅನಾಲಿಸಿಸ್, ಬ್ಲಾಕ್ ಚೈನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ರೈತರ ನೆರವಿಗೆ ಒದಗಿ ಬರಬೇಕು. ಈ ಉದ್ದೇಶಕ್ಕಾಗಿ ನಮ್ಮ ಸರ್ಕಾರ ಕಳೆದ 40ವರ್ಷಗಳಲ್ಲೇ ಅತ್ಯಧಿಕ ಬಿಜಿನೆಸ್ ಇನ್ ಕ್ಯುಬೇಟರ್ಗಳಿಗೆ ಆದ್ಯತೆ ನೀಡಿದೆ ಎಂದರು.

ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಲ್ಲಿ ನಡೆಯುವ ಶೋಧನೆಗಳು ಜನರಿಗೆ ತಲುಪಲು ವಾಣಿಜ್ಯ ಬಳಕೆಗೆ ಬರಬೇಕು. ಇದಕ್ಕಾಗಿ ಸ್ಪಷ್ಟವಾದ ದಾರಿಯನ್ನು ಕಂಡುಕೊಳ್ಳಬೇಕು. ಸಂಶೋಧನೆಗೆ ಕಲೆ ಮತ್ತು ಮಾನವೀಯ ಮುಖವೂ ಇರಬೇಕು ಎಂಬ ಆಶಯ ವ್ಯಕ್ತ ಪಡಿಸಿದರು.

1,000 ಪತ್ರಿಭಾವಂತರಿಗೆ ಪಿಎಚ್ ಡಿ
ಪ್ರಧಾನ ಮಂತ್ರಿ ರಿಸರ್ಚ್ ಫೆಲೋಶಿಪ್ ಅಡಿ 1000ಪ್ರತಿಭಾವಂತರಿಗೆ ಐಐಎಸ್‌ಸಿ, ಐಐಟಿಗಳಂತಹ ಸಂಸ್ಥೆಗಳಲ್ಲಿ ನೇರವಾಗಿ ಪಿಎಚ್ಡಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

₹3600 ಕೋಟಿ ಸೈಬರ್ ವ್ಯವಸ್ಥೆಗೆ
ಸೈಬರ್ ಫಿಸಿಕಲ್ ನ್ಯಾಷನಲ್ ಮಿಷನ್ ಗೆ ₹3600 ಕೋಟಿ ನಿಗದಿ ಮಾಡಲಾಗಿದೆ ಎಂದು ಮೋದಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT