ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಗನ್ ಯುದ್ಧನಿಪುಣನಿಂದ ಪುಲ್ವಾಮಾ ದಾಳಿಕೋರನಿಗೆ ತರಬೇತಿ?

ಪಾಕ್‌ ಸೇನೆಯಿಂದ ತರಬೇತಿ ಪಡೆದಿದ್ದ ರಶೀದ್
Last Updated 17 ಫೆಬ್ರುವರಿ 2019, 2:16 IST
ಅಕ್ಷರ ಗಾತ್ರ

ನವದೆಹಲಿ: ಕುಪ್ವಾರಾ ಮೂಲಕ ಭಾರತದೊಳಕ್ಕೆ ನುಸುಳಿದ್ದ ಆಫ್ಗನ್ ಯುದ್ಧನಿಪುಣ ಘಾಜಿ ರಶೀದ್ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆಸಿದ್ದ ಅದಿಲ್ ಅಹ್ಮದ್ ದಾರ್‌ಗೆ ತರಬೇತಿ ನೀಡಿದ್ದ ಎಂದು ವರದಿಯಾಗಿದೆ.

ಕಾಶ್ಮೀರಿ ಯುವಕರಿಗೆ ಉಗ್ರ ತರಬೇತಿ ನೀಡಿ ಭಾರತದಲ್ಲಿ ದುಷ್ಕೃತ್ಯ ಎಸಗುವಂತೆ ಮಾಡಲು ಪಾಕಿಸ್ತಾನಿ ಉಗ್ರ ಸಂಘಟನೆಗಳು ಹವಣಿಸುತ್ತಿವೆ. ಅದರ ಭಾಗವಾಗಿಯೇ ಪುಲ್ವಾಮಾ ದಾಳಿಯೂ ನಡೆದಿದೆ. ಕಳೆದ ತಿಂಗಳುಜೈಷ್‌–ಎ–ಮೊಹಮ್ಮದ್‌ ಸಂಘಟನೆಯ 15 ಉಗ್ರರು ಪೂಂಛ್ ಮೂಲಕ ಭಾರತದೊಳಕ್ಕೆ ನುಸುಳಿದ್ದರು ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್‌18 ವರದಿ ಮಾಡಿದೆ.

ಜೈಷ್‌–ಎ–ಮೊಹಮ್ಮದ್‌ನ ರಶೀದ್ ಮತ್ತು ಕಮ್ರಾನ್ ಎಂಬ ಉಗ್ರರು ಪುಲ್ವಾಮಾ ದಾಳಿಯ ಸಂಚು ಹೂಡಿದ್ದರು. ಅದಿಲ್‌ಗೆ ತರಬೇತಿ ನೀಡಲು ಸ್ಫೋಟಕಗಳು ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ ಕಳೆದ ತಿಂಗಳು ಕಮ್ರಾನ್ ಭಾರತಕ್ಕೆ ನುಸುಳಿದ್ದ. ಮತ್ತೊಬ್ಬ ಉಗ್ರ ರಶೀದ್‌ಗೆ ಗಡಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಪಾಕಿಸ್ತಾನ ಸೇನೆಯ ವಿಶೇಷ ಸೇವಾ ದಳ ತರಬೇತಿ ನೀಡಿತ್ತು. ಈತ ವಾಯವ್ಯ ಪಾಕಿಸ್ತಾನ ಪ್ರದೇಶದಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಎನ್ನಲಾಗಿದೆ.

ಜೈಷ್‌–ಎ–ಮೊಹಮ್ಮದ್‌ ಸಂಘಟನೆಯು ತನ್ನ ಕಮಾಂಡರ್‌ಗಳಿಗೇ ದಾಳಿ ನಡೆಸುವಂತೆ ಸೂಚಿಸಿದ್ದಿರಬಹುದು. ಆದರೆ, ಕಾಶ್ಮೀರಿ ಯುವಕರಿಗೇ ತರಬೇತಿ ನೀಡಿ ಅವರಿಂದಲೇ ಭೀಕರ ದಾಳಿ ನಡೆಸುವ ಸಾಮರ್ಥ್ಯ ತಮಗಿದೆ ಎಂಬುದನ್ನು ಸಾಬೀತುಪಡಿಸುವುದೂ ಉಗ್ರ ಸಂಘಟನೆಗಳ ಉದ್ದೇಶವಾಗಿತ್ತು. ಸ್ಥಳೀಯ ಯುವಕನನ್ನು ದಾಳಿಗೆ ಬಳಸಿಕೊಳ್ಳುವ ಮೂಲಕ ಮತ್ತಷ್ಟು ಯುವಕರನ್ನು ದುಷ್ಕೃತ್ಯ ಎಸಗುವಂತೆ ಪ್ರೇರೇಪಿಸುವುದೂ ಉಗ್ರ ಸಂಘಟನೆಗಳ ಸಂಚು ಎನ್ನಲಾಗಿದೆ.

ಈ ಮಧ್ಯೆ, ದಾಳಿಯಲ್ಲಿ ರಶೀದ್ ಮತ್ತು ಕಮ್ರಾನ್ ಎಂಬುವವರ ಕೈವಾಡ ಇರುವುದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಲ್ಲಗಳೆದಿದ್ದಾರೆ. ಆದರೆ, ಗುಪ್ತಚರ ಮೂಲಗಳು ದೃಢಪಡಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT