ನವದೆಹಲಿ: ಚೀನಾದೊಂದಿಗೆ ನಡೆದಿರುವ ಗಡಿ ವಿವಾದ ಕುರಿತು ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ನಡೆಯನ್ನು ಬಿಜೆಪಿ ಟೀಕಿಸಿದೆ.
‘ಸೂಕ್ಷ್ಮ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ರಾಹುಲ್ ಅವರು ಪ್ರಧಾನಿಯನ್ನು ಕೇಳುತ್ತಿದ್ದಾರೆ. ಆದರೆ, ರಾಹುಲ್ ಅವರು ಚೀನಾದಲ್ಲಿ ಮಾಹಿತಿ ಪಡೆಯಲು ಸಮಾನಾಂತರ ವ್ಯವಸ್ಥೆ ಹೊಂದಿದ್ದಾರೆಂದು ನನ್ನ ಭಾವನೆ’ ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಕುಟುಕಿದ್ದಾರೆ.
ದೋಕಲಾ ಬಿಕ್ಕಟ್ಟಿನ ಸಮಯದಲ್ಲಿ ರಾಹುಲ್ ಅವರು ಚೀನಾದ ರಾಯಭಾರಿಯನ್ನು ಭೇಟಿಯಾಗಲಿಲ್ಲವೆ? ಇದನ್ನು ಆರಂಭದಲ್ಲಿ ಅವರು ನಿರಾಕರಿಸಿದರೂ, ನಂತರ ಒಪ್ಪಿಕೊಂಡರು ಎಂದು ಹೇಳಿರುವ ಅವರು, ಈ ಬಗ್ಗೆ ರಾಹುಲ್ ಅವರ ಮಾಡಿರುವ ಹಳೆಯ ಟ್ವೀಟ್ ಅನ್ನು ಶುಕ್ರವಾರ ಹಂಚಿಕೊಂಡಿದ್ದಾರೆ.
ಪ್ರಸಾದ್ ಅವರು 2017ರ ಜುಲೈನಲ್ಲಿ ರಾಹುಲ್ ಅವರು ಮಾಡಿರುವ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಚೀನಾದ ರಾಯಭಾರಿ, ಭೂತಾನ್ ರಾಯಭಾರಿ ಮತ್ತು ಈಶಾನ್ಯ ಭಾಗದ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿದ್ದರು. ಸೂಕ್ಷ್ಮ ವಿಷಯಗಳ ಬಗ್ಗೆ ಮಾಹಿತಿ ನೀಡುವುದು ಅವರ ಕೆಲಸವಾಗಿದೆ ಎಂದು ಹೇಳಿದ್ದಾರೆ.