ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ತಮಿಳುನಾಡಿನ ಎಐಎಡಿಎಂಕೆಯ ಇಬ್ಬರುಶಾಸಕರಿಗೆ ಸ್ಪೀಕರ್ ನೀಡಿದ್ದ ನೋಟಿಸ್ಗೆಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಶಾಸಕರ ವಿರುದ್ಧ ಅನರ್ಹತೆ ಪ್ರಕ್ರಿಯೆ ಚಾಲನೆಗೊಳಿಸಲು ಈ ನೋಟಿಸ್ ನೀಡಲಾಗಿತ್ತು. ಶಾಸಕರಾದ ವಿ.ಟಿ. ಕಲೈಸೆಲ್ವನ್ ಮತ್ತು ಇ. ರತ್ನಸಭಾಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದೆ.
ಶಾಸಕರಾದ ವಿ.ಟಿ. ಕಲೈಸೆಲ್ವನ್, ಇ.ರತ್ನಸಭಾಪತಿ ಮತ್ತು ಎ.ಪ್ರಭು ಅವರಿಗೆ ಏಪ್ರಿಲ್ 30ರಂದು ಸ್ಪೀಕರ್ ಪಿ.ಧನಪಾಲ್ ಅವರು ಪಕ್ಷಾಂತರ ವಿರೋಧಿ ಕಾನೂನಿನ ಅನ್ವಯ ನೋಟಿಸ್ ನೀಡಿದ್ದರು.
ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಮುಖಂಡ ಟಿ.ಟಿ.ವಿ. ದಿನಕರನ್ ಅವರೊಂದಿಗೆ ಗುರುತಿಸಿ ಕೊಂಡಿರುವುದಕ್ಕೆ ವಿವರಣೆ ನೀಡುವಂತೆ ನೋಟಿಸ್ನಲ್ಲಿ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮೂವರಲ್ಲಿ ಇಬ್ಬರು ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಪ್ರಜಾಪ್ರಭುತ್ವಕ್ಕೆ ಸಂದ ಜಯ: ’ಅನರ್ಹತೆ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕೆ ಸಂದ ಜಯ. ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ‘ ಎಂದು ಎಐಎಡಿಎಂಕೆಯ ಇಬ್ಬರು ಶಾಸಕರು ತಿಳಿಸಿದ್ದಾರೆ.