ಮುಂಬೈ: ಶಿವಸೇನೆ ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳಬೇಕು. ಮುಂದಿನ ಐದು ವರ್ಷಗಳ ಕಾಲ ಆದಿತ್ಯ ಠಾಕ್ರೆ ಅವರು ಡಿಸಿಎಂ ಆಗಿರಲಿದ್ದಾರೆ ಎಂದು ಆರ್ಪಿಐ ಪಕ್ಷದ ರಾಮ್ದಾಸ್ ಅಠಾವಲೆ ಹೇಳಿದ್ದಾರೆ.
ಬಿಜೆಪಿಯು ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುವ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಮುಂದಿನ ಐದು ವರ್ಷ ಆದಿತ್ಯ ಠಾಕ್ರೆ ಉಪಮುಖ್ಯಮಂತ್ರಿಯಾಗಿ ಹಾಗೂ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮತ್ತು ಶಿವಸೇನೆ ಒಂದುಗೂಡಿ ಆಡಳಿತ ನಡೆಸಬೇಕೆಂದು ನನ್ನ ಇಂಗಿತ. ಎನ್ಡಿಎ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲಲಿಲ್ಲ. ಆದರೆ ಬಹುಮತ ಪಡೆದಿರುವುದರಲ್ಲಿ ಅನುಮಾನವಿಲ್ಲ ಎಂದರು.
ಶಿವಸೇನೆ ಮತ್ತು ಬಿಜೆಪಿ ಜೊತೆಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ತಿಳಿಸುವೆ. ಇನ್ನು ಐದಾರು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂಬ ಭರವಸೆ ನೀಡಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 105, ಶಿವಸೇನೆ 56 ಸ್ಥಾನಗಳನ್ನು ಗೆದ್ದುಕೊಂಡಿದೆ.