ನವದೆಹಲಿ:ವಿಶ್ವದ ಯಾವುದೇ ದೇಶದಲ್ಲಿ ಕೇಳದಂತಹ ವಿಷಯಗಳು ಭಾರತದ ಸಾರ್ವತ್ರಿಕ ಚುನಾವಣಾ ವೇಳೆ ಚರ್ಚೆಗೆ ಬರುತ್ತವೆ ಎಂದು ಆರ್ಥಿಕ ತಜ್ಞ, ನೋಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಮತ್ತು ಶಬರಿಮಲೆ ವಿಷಯಗಳು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಈ ಹೊತ್ತಿನಲ್ಲಿ ಅಮರ್ತ್ಯ ಸೇನ್ ಅವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.
’ಉದಾಹರಣೆಗೆ, ರಾಮಮಂದಿರ ನಿರ್ಮಿಸಬೇಕೇ ಮತ್ತು ಋತುಮತಿಯರಾದ ಮಹಿಳೆ ದೇಗುಲ ಪ್ರವೇಶ ಮಾಡಬೇಕೇ ಬೇಡವೇ? ವಿಷಯಗಳು ಚರ್ಚೆಯಾಗುತ್ತವೆ. ಚುನಾವಣಾ ವರ್ಷದಲ್ಲಿ ಇವೇನು ಗಂಭೀರ ವಿಷಯವೇ?‘ ಎಂದು ಹೇಳಿದ್ದಾರೆ.
‘ಅದನ್ನು ಜನರು ಸ್ವೀಕರಿಸುವುದಿಲ್ಲ ಮತ್ತು ಜನರಿಗೆ ಕಿರುಕುಳ ನೀಡುವುದು ಸ್ವೀಕಾರಾರ್ಹವಲ್ಲ. ರಾಷ್ಟ್ರದಲ್ಲಿನ ಪ್ರಸ್ತುತ ಪರಿಸ್ಥಿತಿ ಬದಲಾಗಬೇಕು’ ಎಂದು ಅವರು ಹೇಳಿದ್ದಾರೆ.
‘ದೇಶದ ಹಲವು ವಿಶ್ವವಿದ್ಯಾಲಯಗಳು ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ವಿಷಯವಾಗಿ ನರಳುತ್ತಿವೆ. ಇತರ ಸಂಸ್ಥೆಗಳೂ ಸಹ ಇದರಿಂದ ಹೊರತಾಗಿಲ್ಲ ಎಂದಿದ್ದಾರೆ.
ಸಾರ್ವತ್ರಿಕ ಚುನಾವಣೆ ಎದುರು ನೋಡುತ್ತಿರುವ ಸಂದರ್ಭದಲ್ಲಿಸೇನ್, ‘ಪತ್ರಕರ್ತರು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಅದು ಸ್ವೀಕಾರಾರ್ಹವಲ್ಲ. ಚುನಾವಣೆ ಸಮೀಪಿಸುತ್ತಿದೆ, ಏನಾಗುತ್ತದೆ ನೋಡೋಣ’ ಎಂದಿದ್ದಾರೆ.