ನವದೆಹಲಿ: ಎರಡು ವರ್ಷಗಳ ಹಿಂದೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ 'ಗಳಿಸಿದ ಯಶಸ್ಸಿನ ಬಗ್ಗೆ ಪ್ರಾರಂಭದಲ್ಲಿ ಹರ್ಷಚಿತ್ತರಾಗುವುದು ಸಹಜ.ಆದರೆ ಕಾರ್ಯಾಚರಣೆಯ ಬಗೆಗೆ ನಿರಂತರ ಪ್ರಚಾರ ಅನಗತ್ಯ' ಎಂದಿದ್ದಾರೆ.ಹೂಡಾ ಅವರ ಮಾತುಗಳನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಾಜಕೀಯ ಬಂಡವಾಳಕ್ಕಾಗಿ ನಿರ್ದಿಷ್ಟ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.
Spoken like a true soldier General. India is so proud of you. Mr 36 has absolutely no shame in using our military as a personal asset. He used the surgical strikes for political capital and the Rafale deal to increase Anil Ambani’s real capital by 30,000 Cr. #SurgicalStrike https://t.co/IotXWBsIih
— Rahul Gandhi (@RahulGandhi) December 8, 2018
2016 ಸೆಪ್ಟೆಂಬರ್ 29ರಂದು ಗಡಿ ನಿಯಂತ್ರಣ ರೇಖೆಯ ಸಮೀಪ ಪಾಕ್ ಉಗ್ರರ ಶಿಬಿರದ ಮೇಲೆ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿದ್ದ ವೇಳೆ ಹೂಡಾ ಅವರು ಉತ್ತರ ವಲಯದ ಸೇನಾ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಹೂಡಾ ಅವರ ಮಾತಿಗೆ ಸಹಮತ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ ರಾಹುಲ್, ಮಿ. 36 ಅವರಿಗೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಸೇನೆಯನ್ನು ಬಳಸಿದ್ದರಲ್ಲಿ ಯಾವುದೇ ನಾಚಿಕೆ ಇಲ್ಲ. ರಾಜಕೀಯ ಬಂಡವಾಳಕ್ಕಾಗಿ ಅವರು ನಿರ್ದಿಷ್ಟ ದಾಳಿ ನಡೆಸಿದರು.ರಫೇಲ್ ಒಪ್ಪಂದದ ಮೂಲಕ ಅನಿಲ್ ಅಂಬಾನಿಯ ಅಸಲಿ ಬಂಡವಾಳದಲ್ಲಿ 30,000 ಕೋಟಿ ಏರಿಕೆಯನ್ನುಂಟು ಮಾಡಿದರು ಎಂದಿದ್ದಾರೆ.
ಹೂಡಾ ಅವರ ಮಾತಿಗೆ ಮೆಚ್ಚುಗೆ ಸೂಚಿಸಿದ ರಾಹುಲ್ ನೀವು ನಿಜವಾದ ಸೇನಾಧಿಕಾರಿ, ಭಾರತ ಹೆಮ್ಮೆ ಪಡುತ್ತದೆ ಎಂದು ಟ್ವೀಟಿಸಿದ್ದಾರೆ.
ಏತನ್ಮಧ್ಯೆ, ಹೂಡಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಇದೆಲ್ಲಾ ವೈಯಕ್ತಿಕ ದೃಷ್ಟಿಕೋನಗಳು.ಹಾಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದು ಬೇಡ.ಈ ಕಾರ್ಯಾಚರಣೆ ನಡೆಯುವಾಗ ಅವರು ಇದರಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಆದ್ದರಿಂದ ನಾನು ಅವರ ಮಾತುಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.
ಸೇನೆಯಲ್ಲಿರುವ ಆಯ್ಕೆ ನಿರ್ದಿಷ್ಟ ದಾಳಿ. ಅದರಿಂದಾಗಿ ದೇಶಕ್ಕೆ ಧನಾತ್ಮಕ ಪರಿಣಾಮವುಂಟಾಗುತ್ತದೆ. ಭಯೋತ್ಪಾದನೆಯನ್ನು ತಡೆಗಟ್ಟಲು ಇದರಿಂದ ಸಾಧ್ಯವಾಗಿದೆ ಎಂದು ಜನರಲ್ ಆಫೀಸರ್ ಆಫ್ ಕಮಾಂಡಿಂಗ್ (ಉತ್ತರ ವಲಯ) ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.