ನವದೆಹಲಿ: ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ತಮ್ಮನ್ನು ನೇಮಕ ಮಾಡಿಲ್ಲ. ಇದೆಲ್ಲ ಊಹಾಪೋಹ ಎಂದು ಸುಷ್ಮಾ ಸ್ವರಾಜ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರು ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದಾರೆ ಎಂದುಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಡಾ. ಹರ್ಷ ವರ್ಧನ ಅವರು ಸೋಮವಾರ ರಾತ್ರಿ ಟ್ವೀಟ್ಟರ್ನಲ್ಲಿ ಅಭಿನಂದನೆ ಸಲ್ಲಿಸಿದರು.
‘ನನ್ನ ಸೋದರಿ, ವಿದೇಶಾಂಗ ಇಲಾಖೆಯ ಮಾಜಿ ಸಚಿವೆ ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಅವರಿಗೆ ಅಭಿನಂದನೆಗಳು. ಸುಷ್ಮಾ ಸ್ವರಾಜ್ ಅವರ ಅನುಭವದ ಫಲವನ್ನು ಆ ರಾಜ್ಯದ ಜನ ಪಡೆಯಲಿದ್ದಾರೆ,’ ಎಂದು ಅವರು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದರು.
The news about my appointment as Governor of Andhra Pradesh is not true.
— Sushma Swaraj (@SushmaSwaraj) June 10, 2019
I called on the Vice President of India Shri Venkaiah Naidu ji on demitting office as Minister of External affairs. This was enough for Twitter to appoint me as the Governor of Andhra Pradesh.
— Sushma Swaraj (@SushmaSwaraj) June 10, 2019
ಕೂಡಲೇ ಇದಕ್ಕೆ ಸ್ಪಷ್ಟನೆ ನೀಡಿದ ಸುಷ್ಮಾ ಸ್ವರಾಜ್ ಅವರು ‘ಇಲ್ಲ... ನನ್ನನ್ನು ರಾಜ್ಯಪಾಲೆಯಾಗಿ ನೇಮಕ ಮಾಡಿಲ್ಲ. ಇದೆಲ್ಲವೂ ಸುಳ್ಳು. ವಿದೇಶಾಂಗ ಇಲಾಖೆಯಿಂದ ನಿರ್ಗಮಿಸುತ್ತಿರುವ ನಾನು ನನ್ನ ಜಾವಾಬ್ದಾರಿಗಳ ಬಿಡುಗಡೆ ಪ್ರಕ್ರಿಯೆಗಾಗಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದೆ. ನಾನು ರಾಜ್ಯಪಾಲೆಯಾಗಿ ನೇಮಕವಾದೆ ಎಂದು ಸುದ್ದಿ ಹರಡಲು ಇಷ್ಟೇ ಸಾಕಾಯಿತು,’ ಎಂದು ಅವರು ಸ್ಪಷ್ಟಪಡಿಸಿದರು.
ಸುಷ್ಮಾ ಸ್ವರಾಜ್ ಅವರು ಇತ್ತ ಟ್ವೀಟ್ ಮಾಡಿ ಸ್ಪಷ್ಟನೆ ನೀಡುತ್ತಲೇ,ಅತ್ತ ಸಚಿವ ಹರ್ಷವರ್ಧನ ಅವರು ತಮ್ಮ ಅಭಿನಂದನಾ ಟ್ವೀಟ್ ಅನ್ನು ಡಿಲಿಟ್ ಮಾಡಿದರು.
ಇಷ್ಟು ಪ್ರಸಂಗದೊಂದಿಗೆ ಸುಷ್ಮಾ ಸ್ವರಾಜ್ ಅವರು ಆಂಧ್ರದ ರಾಜ್ಯಪಾಲರಾದರೆಂಬ ಸುದ್ದಿ ಕೊನೆಗೊಂಡಿತು.
ತಾವು ಲೋಕಸಭೆ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಚುನಾವಣೆ ಘೋಷಣೆಗೂ ಮೊದಲೇ ಸುಷ್ಮಾ ಸ್ವರಾಜ್ ಹೇಳಿಕೊಂಡಿದ್ದರು. ನಂತರ ಎನ್ಡಿಎ–2 ಸರ್ಕಾರದಲ್ಲಿ ಸುಷ್ಮಾ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಮೋದಿ ಸರ್ಕಾರದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.