ಹೈದರಾಬಾದ್: ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಟಿಡಿಪಿ ಜತೆಗೆ ಮೈತ್ರಿ ಮಾಡಿಕೊಳ್ಳಬೇಕೇ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಆ ರಾಜ್ಯದ ಉಸ್ತುವಾರಿ ಆರ್.ಸಿ. ಕುಂಟಿಯಾ ಹೇಳಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಟಿಡಿಪಿ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಕಾಂಗ್ರೆಸ್ಗೆ 19 ಕ್ಷೇತ್ರಗಳಲ್ಲಿ ಗೆಲ್ಲಲು ಮಾತ್ರ ಸಾಧ್ಯವಾಗಿತ್ತು. ಹಾಗಾಗಿ ಟಿಡಿಪಿ ಜತೆಗೆ ಮೈತ್ರಿ ಮುಂದುವರಿಸುವುದಕ್ಕೆ ಕಾಂಗ್ರೆಸ್ನ ಒಂದು ವರ್ಗ ವಿರೋಧ ವ್ಯಕ್ತಪಡಿಸುತ್ತಿದೆ.
ರಾಷ್ಟ್ರ ಮಟ್ಟದಲ್ಲಿ ಟಿಡಿಪಿ ಜತೆಗೆ ನಮ್ಮ ಸಂಬಂಧ ಉತ್ತಮವಾಗಿದೆ. ಆದರೆ, ರಾಜ್ಯದಲ್ಲಿ ಬೇರೆಯೇ ರೀತಿಯ ಕಾರ್ಯತಂತ್ರ ಅನುಸರಿಸಬೇಕಾಗುತ್ತದೆ ಎಂದು ಕುಂಟಿಯಾ ಹೇಳಿದ್ದಾರೆ.