ಛತ್ತರ್ಪುರ/ಮಧ್ಯ ಪ್ರದೇಶ: ‘ರಾಜಕೀಯವಾಗಿ ನನ್ನನ್ನು ಎದುರಿಸುವ ಸಾಮರ್ಥ್ಯ ಇಲ್ಲದ ಕಾಂಗ್ರೆಸ್ ಅನಗತ್ಯವಾಗಿ ರಾಜಕಾರಣದಲ್ಲಿ ನನ್ನ ತಾಯಿಯ ಹೆಸರು ಎಳೆ ತಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಮೋದಿಯನ್ನು ನೇರವಾಗಿ ಎದುರಿಸಲಾಗದ ಕಾಂಗ್ರೆಸ್ ನಾಯಕರು ಮೋದಿಯ ತಾಯಿಯನ್ನು ಶಪಿಸುತ್ತಿದ್ದಾರೆ. ರಾಜಕೀಯವಾಗಿ ಅವರಿಗೆ ಯಾವುದೇ ವಿಷಯ ಸಿಗದ ಕಾರಣ ನನ್ನ ತಾಯಿಯ ಹೆಸರು ಎಳೆದು ತಂದಿದ್ದಾರೆ. ಇದು ಅವರ ಸಂಸ್ಕೃತಿ ತೋರಿಸುತ್ತದೆ’ ಎಂದು ತಿರುಗೇಟು ನೀಡಿದ್ದಾರೆ.
ಶನಿವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ನನ್ನ ತಾಯಿಗೆ ಪೂಜೆ ಮತ್ತು ಪ್ರಾರ್ಥನೆ ಬಿಟ್ಟರೆ ರಾಜಕೀಯದ ಗಂಧಗಾಳಿಯೂ ಗೊತ್ತಿಲ್ಲ. ಅಂಥವರ ಹೆಸರು ಎಳೆದು ತರುವುದು ಶೋಭೆ ತರುವುದಿಲ್ಲ’ ಎಂದರು.
‘ಡಾಲರ್ ಎದುರು ರೂಪಾಯಿ ಮೌಲ್ಯವು ಮೋದಿ ತಾಯಿಯ ವಯಸ್ಸಿನ ಮಟ್ಟಕ್ಕೆ ಕುಸಿದಿದೆ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಮತ್ತು ನಟ ರಾಜ್ ಬಬ್ಬರ್ ಟೀಕಿಸಿದ್ದರು.
ಜನರ ಬೆನ್ನಿಗೆ ಪ್ರಧಾನಿ ಚೂರಿ: ರಾಹುಲ್
ಸಾಗರ/ ಮಧ್ಯ ಪ್ರದೇಶ: ಪ್ರತಿವರ್ಷ ಎರಡು ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಆ ಭರವಸೆ ಈಡೇರಿಸದೆ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ವಿದೇಶಿ ಬ್ಯಾಂಕ್ಗಳಲ್ಲಿರುವ ಭಾರತೀಯರ ಕಪ್ಪುಹಣ ಮರಳಿ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡುವ ಪ್ರಧಾನಿ ಭರವಸೆ ಐದು ವರ್ಷವಾದರೂ ಈಡೇರಲಿಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.