ಕೋಲ್ಕತ್ತ : ‘ಸಾಮಾಜಿಕ ಮೌಲ್ಯಗಳನ್ನು ಸಾರಿದ ಬಂಗಾಳದ ಮಹಾತ್ಮರ ಪ್ರತಿಮೆಗಳನ್ನು ರಾಜ್ಯದ ವಿವಿಧ ಭಾಗಗಗಳಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿದೆ.
‘ನಾವು ಬಂಗಾಳದ ಶ್ರೇಷ್ಠ ವ್ಯಕ್ತಿಗಳ ಪ್ರತಿಮೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದೇವೆ. ಈ ಮಹಾತ್ಮರು ಸಮಾಜಕ್ಕೆ ಜಾತ್ಯತೀತ ಮೌಲ್ಯವನ್ನು ಬೋಧಿಸಿದ್ದಾರೆ. ಅವರ ಸಂದೇಶಗಳನ್ನು ಪ್ರತಿಮೆಗಳ ಫಲಕಗಳಲ್ಲಿ ಕೆತ್ತಲಾಗುವುದು’ ಎಂದು ಹಿರಿಯ ಟಿಎಂಸಿ ಮುಖಂಡರೊಬ್ಬರು ತಿಳಿಸಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ರಾಜಾರಾಮ್ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್ ಸೇರಿದಂತೆ ಸಿನಿಮಾ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದುತ್ವವನ್ನು ಪ್ರತಿನಿಧಿಸುವ ಬಿಜೆಪಿ ಕಾರ್ಯಸೂಚಿಯನ್ನು ಎದುರಿಸುವ ಉದ್ದೇಶದಿಂದ ತೃಣಮೂಲ ಕಾಂಗ್ರೆಸ್ ಪ್ರತಿಮೆ ನಿರ್ಮಾಣದ ಕಾರ್ಯತಂತ್ರ ನಡೆಸಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.