ಕೋಟಾ/ಸೂರಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಬಗ್ಗೆ ಸಮೀಕ್ಷೆ ನಡೆಸುತ್ತಿರುವ ಶಂಕೆ ಮೇಲೆಇಬ್ಬರು ಯುವತಿಯರ ಮೇಲೆ ಹಲ್ಲೆ ನಡೆಸಿದ ಘಟನೆ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
2019–20ರ ರಾಷ್ಟ್ರೀಯ ಆರ್ಥಿಕ ಗಣತಿಗೆ, ಸಂಬಂಧಪಟ್ಟ ಇಲಾಖೆ ಪ್ರಯುಕ್ತ ಮಾಹಿತಿ ಪಡೆಯಲು ಬ್ರಿಜ್ದಾಮ್ ಪ್ರದೇಶಕ್ಕೆ ಬಂದಿದ್ದ ಯುವತಿ ನಾಸೀರನ್ ಬನೊ ಎಂಬುವವರ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ. ತಾನು ಸಹ ಮುಸ್ಲೀಂ ಎಂದು ಹೇಳಿದ ನಂತರವೇ ಆಕೆಯನ್ನು ಬಿಟ್ಟಿದ್ದಾರೆ. ಈ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬರನ್ನು ಬಂಧಿಸಿದ್ದಾರೆ.
‘ಸಮೀಕ್ಷೆಗೆ ಬಂದಿದ್ದ ಮಹಿಳೆಯ ಮೊಬೈಲ್ ಫೋನ್ ಕಸಿದುಕೊಂಡು, ಆರ್ಥಿಕ ಗಣತಿಗೆ ಸಂಬಂಧಪಟ್ಟಂತೆ ಸಂಗ್ರಹಿಸಿದ್ದ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ’ಎಂದು ಗ್ರಾಮಾಧಿಕಾರಿ ಮಹೇಶ್ ಸಿಂಗ್ ತಿಳಿಸಿದರು.
‘ಬ್ರಿಜ್ದಾಮ್ ಪ್ರದೇಶದ ಜನರು ಮೊದಲಿಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡುತ್ತಿದ್ದರು. ಆದರೆ, ಕೆಲ ಸಮಯದ ನಂತರ ನಾಲ್ಕೈದು ಕುಟುಂಬಗಳು ವಾಪಸ್ ಕರೆದು, ಮಾಹಿತಿ ಹಂಚಿಕೊಳ್ಳುವುದಕ್ಕೆ ತಮಗೆಇಷ್ಟವಿಲ್ಲ, ಹಾಗಾಗಿ ನೀಡಿರುವ ಮಾಹಿತಿಯನ್ನು ಅಳಿಸುವಂತೆ ಕೇಳಿದರು. ನಾನು ಅವರಿಗೆ ಇದು ಆರ್ಥಿಕ ಗಣತಿಗಾಗಿ ಪಡೆಯಲಾಗಿದ್ದು,ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅರ್ಥೈಸಲು ಪ್ರಯತ್ನಿಸಿದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ.ದಾಳಿಗೆ ಮುಂದಾದರು’ ಎಂದು ಬಿನೊ ವಿವರಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪಶ್ಚಿಮಬಂಗಾಳದ ಬಿರ್ಬೂಮ್ನಲ್ಲಿಯೂ 20 ವರ್ಷದ ಚುಮ್ಕಿ ಕಠುನ್ ಮೇಲೆ ಅಲ್ಲಿನ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಕಠುನ್ ಅವರು ಗೂಗಲ್ ಇಂಡಿಯಾ ಮತ್ತು ಟಾಟಾ ಟ್ರಸ್ಟ್ ನ ಉದ್ಯೋಗಿಯಾಗಿದ್ದು, ಗ್ರಾಮೀಣ ಮಹಿಳೆಯರಲ್ಲಿ ಡಿಜಿಟಲ್ ಸಾಕ್ಷರತೆ ಎಷ್ಟಿದೆ ಎಂಬ ಕುರಿತು ಸಮೀಕ್ಷೆ ನಡೆಸುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.