ಮುಜಫ್ಫರ್ನಗರ (ಉತ್ತರ ಪ್ರದೇಶ): ಸರ್ಕಾರಿ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕ ಬೇರೆ ಬೇರೆ ಜಿಲ್ಲೆಯ ಎರಡು ಶಾಲೆಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಪ್ರದೀಪ್ ಕುಮಾರ್ ಎಂಬುವವರು ಒಂದೇ ದಾಖಲೆಗಳನ್ನು ನೀಡಿ ಮುಜಫ್ಫರ್ನಗರ ಮತ್ತು ಬರೇಲಿ ಜಿಲ್ಲೆಗಳ ಸರ್ಕಾರಿ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು.
‘ಪ್ರದೀಪ್ ಕುಮಾರ್ 2011 ಜೂನ್ನಿಂದಲೂ ಮುಜಫ್ಫರ್ನಗರದಲ್ಲಿ ಮನೆ ಮಾಡಿಕೊಂಡು, ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಬರೇಲಿಯಲ್ಲಿರುವ ಶಾಲೆಗೆ ಆತ ಹೋಗುತ್ತಲೇ ಇರಲಿಲ್ಲ. ಆದರೆ ಆ ಶಾಲೆಯಿಂದ ಸಂಬಳ ಪಡೆದುಕೊಳ್ಳುತ್ತಿದ್ದ ವಿಷಯ ದಾಖಲೆಗಳ ಪರಿಶೀಲನೆ ವೇಳೆ ಗೊತ್ತಾಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದು ಶಿಕ್ಷಣ ಅಧಿಕಾರಿ ನರೇಂದ್ರ ಸಿಂಗ್ ಮಾಹಿತಿ ನೀಡಿದರು.
‘ಎಂಟು ವರ್ಷಗಳ ಕಾಲ ಮುಜಫ್ಫರ್ನಗರ ಶಾಲೆಯಲ್ಲಿ ಪಾಠ ಮಾಡಿ, 2019 ನವೆಂಬರ್ನಲ್ಲಿ ವೈದ್ಯಕೀಯ ಕಾರಣ ನೀಡಿ ರಜೆ ತೆಗೆದುಕೊಂಡಿದ್ದ ಪ್ರದೀಪ್ ಕುಮಾರ್, ನಂತರ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಈಗ ಆತ ಎಲ್ಲಿದ್ದಾನೆ ಎನ್ನುವ ಕುರಿತು ಮಾಹಿತಿ ಇಲ್ಲ’ ಎಂದೂ ತಿಳಿಸಿದರು.
ಒಂದೇ ದಾಖಲೆ ನೀಡಿ, ವಿವಿಧ ಸರ್ಕಾರಿ ಶಾಲೆಗಳಲ್ಲಿ ಕೆಲಸ ಪಡೆದುಕೊಳ್ಳುತ್ತಿದ್ದ ಹಲವರನ್ನು ಕಳೆದ ತಿಂಗಳ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.