ಹೈದರಾಬಾದ್: ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ನಂತರ ಪೊಲೀಸರ ಗುಂಡಿಗೆ ಬಲಿಯಾದ ನಾಲ್ವರ ಮೃತದೇಹಗಳ ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ತೆಲಂಗಾಣ ಹೈಕೋರ್ಟ್ ಶನಿವಾರ ನಿರ್ದೇಶನ ನೀಡಿದೆ.
ನ್ಯಾಯಾಂಗಕ್ಕೆ ವ್ಯತಿರಿಕ್ತವಾಗಿ ಕೊಲೆ ಹಾಗೂ ನಕಲಿ ಎನ್ಕೌಂಟರ್ ಮೂಲಕ ಪೊಲೀಸರು ನಾಲ್ವರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಕೆಲವರು ಅರ್ಜಿ ಸಲ್ಲಿಸಿದ್ದರಿಂದ ಹೈಕೋರ್ಟ್ನ ಹಿಂದಿನ ಆದೇಶದಂತೆ ಇಲ್ಲಿನ ಸರ್ಕಾರಿ ಗಾಂಧಿ ಆಸ್ಪತ್ರೆಯಲ್ಲಿ ಆರೋಪಿಗಳ ಶವಗಳನ್ನು ಇಡಲಾಗಿದೆ.
ನಾಲ್ವರ ಶವಗಳನ್ನು ಎರಡನೇ ಮರಣೋತ್ತರ ಪರೀಕ್ಷೆ ನಡೆಸಲು ಮೂವರು ವಿಧಿವಿಜ್ಞಾನ ತಜ್ಞರು ಇರುವ ವೈದ್ಯಕೀಯ ತಂಡವನ್ನು ರಚಿಸುವಂತೆ ನವದೆಹಲಿಯ ಏಮ್ಸ್ ಅನ್ನು ಕೋರಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ನಾಲ್ವರು ನವೆಂಬರ್ 29ರಂದು ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದಲ್ಲದೇ, ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಶವವನ್ನು ಸುಟ್ಟು ಹಾಕಿದ್ದರು.
ಡಿಸೆಂಬರ್ 23ರ ಒಳಗೆ ಮರಣೋತ್ತರ ಪರೀಕ್ಷೆ ನಡೆಸಿ ಹೈಕೋರ್ಟ್ನ ರಿಜಿಸ್ಟರ್ ಜನರಲ್ಗೆ ವರದಿ ಸಲ್ಲಿಸಲು ಸೂಚನೆ ನೀಡಿರುವ ಕೋರ್ಟ್, ನಂತರ ಅವರ ಕುಟುಂಬಕ್ಕೆ ಶವ ಹಸ್ತಾಂತರಿಸಲು ಸೂಚನೆ ನೀಡಿದೆ.