ನವದೆಹಲಿ: ಜೀವ ತೆಗೆಯುವ ಬುಲೆಟ್ ಬೇಡ, ಜೀವನ ಕಟ್ಟಿಕೊಳ್ಳಲು ನೆರವಾಗಬಲ್ಲ ಬ್ಯಾಲೆಟ್ (ಮತಪತ್ರ) ಬೇಕು...ಸವಲತ್ತುಗಳನ್ನು ಪುಕ್ಕಟೆ ನೀಡುವ ಬದಲಾಗಿ ಸ್ವಾವಲಂಬಿಯನ್ನಾಗಿ ಮಾಡುವ ಉದ್ಯೋಗ ಬೇಕು....
–ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲು ಉತ್ಸಾಹದಿಂದಲೇ ಪಾಲ್ಗೊಂಡಿದ್ದ ಯುವ ಜನತೆಯ ಆದ್ಯತೆಗಳಿವು.
‘ಸಮಾನತೆ, ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಹಾಗೂ ಶುದ್ಧ ಗಾಳಿ ಹೊಸ ಮತದಾರರ ಆದ್ಯತೆಗಳು. ಹೀಗಾಗಿ ಈ ಅಂಶಗಳಿಗೆ ಒತ್ತು ನೀಡುವ ಪಕ್ಷವನ್ನು ಗಮನದಲ್ಲಿಟ್ಟುಕೊಂಡು ನಾನು ಮತ ಚಲಾಯಿಸಿದ್ದೇನೆ’ ಎಂದು 21 ವರ್ಷದ ಅಕ್ಷಯ್ ಸಿಂಗ್ ಹೇಳಿದರು.
‘ಇದೇ ಮೊದಲ ಬಾರಿಗೆ ನನ್ನ ಹಕ್ಕನ್ನು ಚಲಾಯಿಸಿದ ಖುಷಿ ಇದೆ. ಜನರ ಮನಸುಗಳನ್ನು ಒಡೆಯುವ ಶಕ್ತಿಗಳನ್ನು ಬುಲೆಟ್ನಿಂದ ಎದುರಿಸಲಾಗದು. ಮತ ಚಲಾವಣೆ ಮೂಲಕ ಇಂತಹ ಶಕ್ತಿಗಳ ವಿರುದ್ಧ ಹೋರಾಟ ಸಾಧ್ಯ’ ಎಂಬು ದು ತಿಲಕ್ನಗರದ ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತಿದ್ದ ಪ್ರವೀಣ್ ಪೂಂಜ್ ಎಂಬ ಯುವಕನ ಪ್ರತಿಪಾದನೆಯಾಗಿತ್ತು.
ನಾಂಗಲೋಯಿ ಪ್ರದೇಶದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಬಂದಿದ್ದ ಪ್ರಹ್ಲಾದ್ ಕುಮಾರ್, ಚಾಂದಿನಿ ಚೌಕ್ ಕ್ಷೇತ್ರದ ಹೊಸ ಮತದಾರರಾದ ರಾಹುಲ್, ಕರಣ್ ಎಂಬುವವರ ಅಭಿಪ್ರಾಯವೂ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಸದಾಫ್ ಮೆಹಬೂಬಾ ಶಾಹೀನ್ ಬಾಗ್ನಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ‘ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಪಕ್ಷಕ್ಕೆ ನನ್ನ ಮತ ಹಾಕಿದ್ದೇನೆ’ ಎಂದರು.
ಕೈಗೆಟುಕುವಂಥ ಸಾರಿಗೆ ಬೇಕು: ರೇಹಾನ್ ವಾದ್ರಾ
ಇದೇ ಮೊದಲ ಬಾರಿಗೆ ಮತ ಚಲಾಯಿಸಿದ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಪುತ್ರ ರೇಹಾನ್, ‘ಸಾರ್ವಜನಿಕ ಸಾರಿಗೆ ಶುಲ್ಕ ಇನ್ನಷ್ಟೂ ಕಡಿಮೆಯಾಗಬೇಕು. ಅದರಲ್ಲೂ ವಿದ್ಯಾರ್ಥಿಗಳಿಗೆ ಕೈಗೆಟುಕುವಂತಿರಬೇಕು’ ಎಂದು ಹೇಳಿದರು.
ಮುಖ್ಯಮಂತ್ರಿ ಕೇಜ್ರಿವಾಲ್ ಪುತ್ರ ಪುಲಕಿತ್ ಸಹ ಮೊದಲ ಸಲ ತಮ್ಮ ಹಕ್ಕು ಚಲಾಯಿಸಿದರು. ‘ಜನರು ಯಾರನ್ನು ಆಯ್ಕೆ ಮಾಡುತ್ತಾರೋ ಅವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಮುಖಂಡ ಅಜಯ್ ಮಾಕನ್ ಪುತ್ರ ಓಜಸ್ವಿ ಮಾಕನ್ ಸಹ ಮೊದಲ ಬಾರಿ ಹಕ್ಕು ಚಲಾಯಿಸಿದ ಖುಷಿಯಲ್ಲಿದ್ದರು.