ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರಕ್ಕೆ ಸುಗ್ರೀವಾಜ್ಞೆ: ಸಂಘ ಪರಿವಾರದ ಬೇಡಿಕೆಗಳೇನು? ಕಾನೂನು ಹೇಳುವುದೇನು?

Last Updated 8 ಏಪ್ರಿಲ್ 2019, 8:35 IST
ಅಕ್ಷರ ಗಾತ್ರ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌), ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮತ್ತು ಇತರ ಕೆಲವು ಸಂಘಟನೆಗಳು ಅಯೋಧ್ಯೆಯಲ್ಲಿ ರಾಮಮಂದಿರಶೀಘ್ರ ನಿರ್ಮಾಣಕ್ಕಾಗಿ ಕಾನೂನು ಜಾರಿಗೆ ಒತ್ತಾಯಿಸುತ್ತಿವೆ.ಡಿ.9ರಂದು ದೆಹಲಿಯಲ್ಲಿ ನಡೆದ ರ‍್ಯಾಲಿಯಲ್ಲಿ ವಿಹಿಂಪ ಮತ್ತು ಆರ್‌ಎಸ್‌ಎಸ್‌ ನಾಯಕರು ಈ ಬೇಡಿಕೆಯನ್ನು ಸ್ಪಷ್ಟವಾಗಿ ಮುಂದಿಟ್ಟರು. ಇದೀಗ ಜ.31ರಂದು ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಸಾಧುಗಳ ಬೃಹತ್ ಸಮಾವೇಶ– ಧರ್ಮ ಸಂಸದ್‌ನಲ್ಲಿಯೂ ಈ ವಿಚಾರವೇ ಪ್ರಧಾನವಾಗಿ ಚರ್ಚೆಯಾಗುವ ಸಾಧ್ಯತೆ ಸ್ಪಷ್ಟವಾಗಿದೆ. ಅಂದಹಾಗೆ ಸುಪ್ರೀಂಕೋರ್ಟ್‌ನಲ್ಲಿಅಯೋಧ್ಯೆ ವಿವಾದದವಿಚಾರಣೆಯೂ ಜ.29ರಿಂದ ಮತ್ತೆ ಆರಂಭವಾಗಲಿದೆ.

ಸುಪ್ರೀಂಕೋರ್ಟ್‌ನಲ್ಲಿ ಅಯೋಧ್ಯೆ ಭೂ ವಿವಾದದ ವಿಚಾರಣೆ ಇನ್ನೂ ಬಾಕಿ ಇದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ಯೋಚಿಸಿದಾಗ ಸರ್ಕಾರದ ಎದುರು ಇರುವ ಆಯ್ಕೆಗಳು ಯಾವುವು ಮತ್ತು ಅವುಗಳ ಪರಿಣಾಮಗಳು ಏನಾಗಬಹುದುಎಂಬ ಅವಲೋಕನದ ಜೊತೆಗೆ ಕಾಲಕಾಲಕ್ಕೆ ಆರ್‌ಎಸ್‌ಎಸ್‌, ಬಿಜೆಪಿ, ವಿಹಿಂಪಗಳು ಇಟ್ಟ ಬೇಡಿಕೆಗಳ ಇಣುಕುನೋಟವೂ ಇಲ್ಲಿದೆ.

1) ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಆರ್‌ಎಸ್ಎಸ್‌, ವಿಹಿಂಪ ಹೇಳುವುದೇನು?

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಹಿಂದೂಗಳ ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ್ದು. ಇದು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ವಿಷಯವಲ್ಲ ಎನ್ನುವುದು ಆರ್‌ಎಸ್‌ಎಸ್‌ ಮತ್ತು ವಿಹಿಂಪ ಬಹುಕಾಲದಿಂದ ಹೇಳುವ ಮಾತು. ಅಯೋಧ್ಯೆಯಲ್ಲಿರುವ ರಾಮನ ಜನ್ಮಸ್ಥಳ ಮತ್ತು ಅದರ ಅಕ್ಕಪಕ್ಕದ ಭೂಮಿಯನ್ನು ಪವಿತ್ರ ತಾಣವಾಗಿ ಅಭಿವೃದ್ಧಿಪಡಿಸಲು ರಾಮ ಜನ್ಮಭೂಮಿ ಟ್ರಸ್ಟ್‌ಗೆ ವಹಿಸಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ 1986ರಲ್ಲಿ ಆರ್‌ಎಸ್‌ಎಸ್‌ ಪ್ರತಿನಿಧಿ ಸಭಾ ನಿರ್ಣಯವೊಂದನ್ನು ಅಂಗೀಕರಿಸಿತ್ತು.

1987ರಲ್ಲಿ ಅಂಗೀಕರಿಸಿದ ಮತ್ತೊಂದು ನಿರ್ಣಯದಲ್ಲಿ ಸೋಮನಾಥ ದೇಗುಲದ ಜೀರ್ಣೋದ್ಧಾರ ವಿಚಾರವನ್ನು ಪ್ರಸ್ತಾಪಿಸಿದ್ದ ಆರ್‌ಎಸ್‌ಎಸ್‌, ‘ರಾಮಜನ್ಮಭೂಮಿ ದೇಗುಲವನ್ನೂ ನಾವು ಮತ್ತೊಮ್ಮೆ ಪ್ರಾಚೀನ ವೈಭವದ ಸ್ಥಿತಿಗೆ ತರಬೇಕಿದೆ’ ಎಂದು ಹೇಳಿದೆ. ‘ಪವಿತ್ರ ಕುರಾನ್‌ ಮೇಲೆ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿ ಇರುವುದಿಲ್ಲ ಎನ್ನುವ ಕಾರಣಕ್ಕೆ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಕರಣವೊಂದನ್ನು ಹಿಂಪಡೆಯುವಲ್ಲಿ ನಾನು ಪ್ರಧಾನ ಪಾತ್ರ ನಿರ್ವಹಿಸಿದೆ’ ಎಂದು ಹೇಳಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆಯನ್ನು 1989ರಲ್ಲಿ ನಡೆದ ಆರ್‌ಎಸ್‌ಎಸ್‌ ಕೇಂದ್ರೀಯ ಕಾರ್ಯಕಾರಿ ಸಮಿತಿ ಅಂಗೀಕರಿಸಿದ ನಿರ್ಣಯದಲ್ಲಿ ಉಲ್ಲೇಖಿಸಿತು. ‘ಈಗ ಇದೇ ಸರ್ಕಾರವು ರಾಮ ಜನ್ಮಭೂಮಿ ವಿವಾದವನ್ನು ನ್ಯಾಯಾಲಯಗಳಲ್ಲಿ ಮುನ್ನಡೆಸುತ್ತಿದೆ. ಇದು ಸರ್ಕಾರದ ತಾರತಮ್ಯ ನೀತಿ’ ಎಂದು ಟೀಕಿಸಿತ್ತು.

2) ರಾಮಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನಿಲುವು ಏನು?

1989ರಲ್ಲಿ ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯ ನಂತರ ಬಿಜೆಪಿ ರಾಮ ಜನ್ಮಭೂಮಿ ಕುರಿತು ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಿತು. ‘ಜನರ ಶ್ರದ್ಧೆಯನ್ನು ಗೌರವಿಸಬೇಕು. ರಾಮಜನ್ಮಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು. ಎರಡು ಪಕ್ಷಗಳು ಪರಸ್ಪರ ಮಾತುಕತೆಯ ಮೂಲಕ ಈ ವಿವಾದವನ್ನು ಪರಿಹರಿಸಿಕೊಳ್ಳಬೇಕು. ಇದು ಸಾಧ್ಯವಾಗದಿದ್ದರೆ ಕಾಯ್ದೆಯೊಂದನ್ನು ಜಾರಿ ಮಾಡಬೇಕು. ನ್ಯಾಯಾಲಯಗಳ ವಿಚಾರಣೆ ಈ ಸಮಸ್ಯೆಗೆ ಪರಿಹಾರವಾಗಲಾರದು‘ ಎಂದು ಬಿಜೆಪಿ ತನ್ನ ಅಭಿಪ್ರಾಯವನ್ನು ತಿಳಿಸಿತ್ತು.

1990ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಅದೇ ವರ್ಷ ಫೆಬ್ರುವರಿಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಲು ಬಿಜೆಪಿ ನಿರ್ಧರಿಸಿತ್ತು. ಆದರೆ ಪ್ರಧಾನಿಯ ಕೋರಿಕೆ ಮೇರೆಗೆ ಮಂದಿರ ನಿರ್ಮಾಣ ದಿನಾಂಕವನ್ನು ಮುಂದೂಡಿತು. ಜೂನ್ ತಿಂಗಳಲ್ಲಿ ಹರಿದ್ವಾರದಲ್ಲಿ ನಡೆದ ಸಭೆಯಲ್ಲಿ ‘ಮಂದಿರ ನಿರ್ಮಾಣ ಆರಂಭಿಸಲು ಅ.30 ಅಂತಿಮ ದಿನಾಂಕ’ ಎಂದು ವಿಹಿಂಪ ಘೋಷಿಸಿತು. ರಾಮಜನ್ಮಭೂಮಿ ವಿಷಯವನ್ನೇ ಮುಖ್ಯವಾಗಿರಿಸಿಕೊಂಡು ಬಿಜೆಪಿ ನಾಯಕ ಎಲ್‌.ಕೆ.ಆಡ್ವಾಣಿ ಸೆ.25ರಂದು ಗುಜರಾತ್‌ನ ಸೋಮನಾಥದಿಂದ ರಥಯಾತ್ರೆ ಆರಂಭಿಸಿದರು. ಅ.23ರಂದು ಭಾಗಲ್ಪುರದಲ್ಲಿ ಬಿಹಾರ ಸರ್ಕಾರ ಅವರನ್ನು ಬಂಧಿಸಿತು. ಇದೇ ಕಾರಣ ಮುಂದೊಡ್ಡಿ ವಿ.ಪಿ.ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆಯಿತು.

1991ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ‘ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸಲು ಬದ್ಧ. ಅಲ್ಲಿರುವ ಬಾಬರಿ ಮಸೀದಿಯನ್ನು ಗೌರವಯುತವಾಗಿ ಸ್ಥಳಾಂತರಿಸಲಾಗುವುದು’ ಎಂದು ಘೋಷಿಸಿತ್ತು. ಡಿಸೆಂಬರ್ 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಲಾಯಿತು.

ಅಕ್ಟೋಬರ್ 14, 1990ರಂದು ದೆಹಲಿಯಲ್ಲಿ ಅಡ್ವಾಣಿ ರಾಮರಥಯಾತ್ರೆ (ಚಿತ್ರ: ಪ್ರಜಾವಾಣಿ ಸಂಗ್ರಹ)
ಅಕ್ಟೋಬರ್ 14, 1990ರಂದು ದೆಹಲಿಯಲ್ಲಿ ಅಡ್ವಾಣಿ ರಾಮರಥಯಾತ್ರೆ (ಚಿತ್ರ: ಪ್ರಜಾವಾಣಿ ಸಂಗ್ರಹ)

3) ವಾಜಪೇಯಿ ಪ್ರಧಾನಿಯಾಗಿದ್ದಾಗ ಮಂದಿರ ನಿರ್ಮಾಣ ವಿಚಾರ ಚರ್ಚೆಯಾಗಲೇ ಇಲ್ಲವೇ?

ವಾಜಪೇಯಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು1996ರ ಮೇ ತಿಂಗಳಲ್ಲಿ.‘ಅಧಿಕಾರಕ್ಕೆ ಬಂದ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇರುವ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗುವುದು’ ಎಂದು ಬಿಜೆಪಿ1996ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. 13 ದಿನಗಳ ನಂತರ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. 1998ರಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರವೇ ಅಧಿಕಾರಕ್ಕೆ ಬಂತು. ಅಧಿಕಾರದಲ್ಲಿದ್ದಾಗ ಅಯೋಧ್ಯೆಯಂಥ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಬಿಜೆಪಿ ಒಲವು ತೋರಲಿಲ್ಲ. 2001ರಲ್ಲಿ ವಿಶ್ವ ಹಿಂದೂ ಪರಿಷತ್‌ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಚಳವಳಿ ಆರಂಭಿಸಿದಾಗ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಂದ ಸಾಕಷ್ಟು ಬೆಂಬಲ ಸಿಗಲಿಲ್ಲ.

ಬಿಜೆಪಿಗೆ ಮತ್ತೆ ಅಯೋಧ್ಯೆ ವಿಚಾರ ನೆನಪಾಗಿದ್ದು 2003ರಲ್ಲಿ.ರಾಯಪುರ್‌ದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಂಗೀರಿಕರಿಸಿದ ನಿರ್ಣಯ ಅಯೋಧ್ಯೆ ವಿಚಾರವನ್ನು ಪ್ರಸ್ತಾಪಿಸುತ್ತದೆ.‘ಅಯೋಧ್ಯೆ ವಿವಾದ ಪರಿಹಾರಕ್ಕಾಗಿ ಕಾನೂನು ಜಾರಿ ಮಾಡುವ ಬಗ್ಗೆ ಎನ್‌ಡಿಎ ಮೈತ್ರಿಕೂಟದ ಸಾಮಾನ್ಯ ಅಜೆಂಡಾ ಏನನ್ನೂ ಹೇಳುವುದಿಲ್ಲ.ಕಾನೂನು ಜಾರಿ ಮೂಲಕ ವಿವಾದ ಪರಿಹರಿಸಲು ಗಮನ ಕೊಡಬೇಕು ಎಂದು ಬಿಜೆಪಿ ಅಭಿಪ್ರಾಯಪಡುತ್ತದೆ. ಪಾಲಂಪುರ್‌ ನಿರ್ಣಯದಲ್ಲಿಯೂ ನಮ್ಮ ಪಕ್ಷವು ಇದನ್ನೇ ಹೇಳಿತ್ತು. ಎನ್‌ಡಿಎ ಮೈತ್ರಿಕೂಟದಲ್ಲಿರುವ ಮಿತ್ರಪಕ್ಷಗಳು ಮತ್ತು ಕಾಂಗ್ರೆಸ್‌ ಸೇರಿದಂತೆ ಇತರ ಪ್ರತಿಪಕ್ಷಗಳು ಬೆಂಬಲ ನೀಡಿದರೆ ಸಂಸತ್ತು ಅಯೋಧ್ಯೆ ವಿವಾದ ಪರಿಹಾರಕ್ಕಾಗಿ ಕಾನೂನು ಮಾರ್ಗ ಅನುಸರಿಸಬಹುದು’ ಎಂದು ಆ ನಿರ್ಣಯ ಹೇಳಿತ್ತು.

4) ವಾಜಪೇಯಿ ಅಧಿಕಾರ ಕಳೆದುಕೊಂಡ ನಂತರದ ಬೆಳವಣಿಗೆಗಳೇನು?

2004ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಅಧಿಕಾರ ಒಲಿಯಿತು. ಅಧಿಕಾರ ಕಳೆದುಕೊಂಡ ನಂತರ ಬಿಜೆಪಿ ಆಗಾಗ ಮಂದಿರ ವಿಚಾರ ಪ್ರಸ್ತಾಪಿಸುತ್ತಿತ್ತಾದರೂ ಅದಕ್ಕೆ ಮತ್ತೆ ಸ್ಪಷ್ಟರೂಪ ಸಿಕ್ಕಿದ್ದು 2009ರ ಚುನಾವಣಾ ಪ್ರಣಾಳಿಕೆಯಲ್ಲಿ. ‘ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಿಸಬೇಕು ಎಂಬುದು ಜನರ ಬಯಕೆ. ಮಂದಿರ ನಿರ್ಮಾಣ ಸಾಧ್ಯತೆಗಳನ್ನು ಬಿಜೆಪಿ ಪರಿಶೀಲಿಸುತ್ತದೆ. ಮಾತುಕತೆಯ ಮೂಲಕ, ನ್ಯಾಯಾಲಯಗಳಲ್ಲಿ ಹೋರಾಟದ ಮೂಲಕ ದೇಗುಲ ನಿರ್ಮಾಣವನ್ನು ಬೆಂಬಲಿಸುತ್ತದೆ‘ ಎಂದುಬಿಜೆಪಿ ಪ್ರಣಾಳಿಕೆ ಹೇಳಿತ್ತು. 2014ರ ಚುನಾವಣಾ ಪ್ರಣಾಳಿಕೆಯಲ್ಲಿ ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂವಿಧಾನದ ಚೌಕಟ್ಟಿನೊಳಗೆ ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಅನುಸರಿಸಲಾಗುವುದು’ ಎಂದು ಬಿಜೆಪಿ ಭರವಸೆ ನೀಡಿತ್ತು. ಇದೀಗ ಬಿಜೆಪಿ ಸರ್ಕಾರ ತನ್ನ ಆಡಳಿತದ ಕೊನೆಯ ವರ್ಷದಲ್ಲಿದೆ. ಆರ್‌ಎಸ್‌ಎಸ್‌ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕರು ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿ ಮಾಡಬೇಕು ಎಂದು ವೀರಾವೇಶದಿಂದ ಒತ್ತಾಯಿಸುತ್ತಿದ್ದಾರೆ. ಬಿಜೆಪಿಯ ಸಂಸದ ರಾಕೇಶ್ ಸಿನ್ಹಾ ದೆಹಲಿಯಲ್ಲಿ ಡಿ.9ರಂದು ಮಾತನಾಡುತ್ತಾ, ‘ಮಂದಿರ ನಿರ್ಮಾಣಕ್ಕಾಗಿ ಖಾಸಗಿ ಮಸೂದೆ ಮಂಡಿಸುವೆ’ ಎಂದು ಹೇಳಿದ್ದಾರೆ.

5) ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕಾನೂನು ಜಾರಿ ಮಾಡಬೇಕು ಎನ್ನುವ ಕೂಗು ಈಗೇಕೆ ಮೇಲೆದ್ದಿದೆ?

ಕಳೆದ ಸೆಪ್ಟೆಂಬರ್‌ನಲ್ಲಿ, ತಾವು ನಿವೃತ್ತರಾಗಲು ಕೆಲ ದಿನಗಳು ಮೊದಲು ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಯೋಧ್ಯೆ ಭೂ ವಿವಾದದ ವಿಚಾರಣೆಗೆ ವೇದಿಕೆ ಸಿದ್ಧಪಡಿಸಿದರು. ‘ಮಸೀದಿಗಳು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ. ಮುಸ್ಲಿಮರು ಎಲ್ಲಿ ಬೇಕಾದರೂ ನಮಾಜ್ ಮಾಡಬಹುದು’ ಎನ್ನುವ1994ರ ತೀರ್ಪನ್ನು ಸಂವಿಧಾನಿಕ ಪೀಠದ ಮರುಪರಿಶೀಲನೆಗೆ ಒಪ್ಪಿಸಬೇಕು ಎನ್ನುವ ಮನವಿಯನ್ನು ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ತಳ್ಳಿಹಾಕಿತು. ಮೂವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠವು ಅ.29ರಿಂದ ವಿಚಾರಣೆ ಆರಂಭಿಸಲಿದೆ ಎಂದು ಮಿಶ್ರಾ ನೇತೃತ್ವದ ನ್ಯಾಯಪೀಠವು ಹೇಳಿತ್ತು. ಮಂದಿರ ನಿರ್ಮಾಣಕ್ಕೆ ಒತ್ತಾಯಿಸುತ್ತಿರುವ ಗುಂಪುಗಳು ಇದು ಪ್ರಕರಣದ ತ್ವರಿತ ವಿಚಾರಣೆಗೆ ಪೂರಕ ಎಂದು ಭಾವಿಸಿದ್ದವು. ಆದರೆ, ನ್ಯಾಯಮೂರ್ತಿ ರಂಜನ್ ಗೊಗಯ್ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ‘ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕು’ ಎನ್ನುವ ಉತ್ತರ ಪ್ರದೇಶ ಸರ್ಕಾರದ ಮನವಿಗೆ ಪುರಸ್ಕಾರ ಸಿಗಲಿಲ್ಲ. ನ್ಯಾಯಪೀಠವು ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿತು.

‘ಅಯೋಧ್ಯೆ ಪ್ರಕರಣದ ವಿಚಾರಣೆ ನ್ಯಾಯಾಲಯಗಳಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ನ್ಯಾಯಾಲಯವು ಪ್ರಕರಣದ ತ್ವರಿತ ವಿಚಾರಣೆಗೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾನೂನು ಜಾರಿ ಮಾಡಬೇಕು’ ಎಂದು ಹಲವು ಗುಂಪುಗಳು ಹುಯಿಲೆಬ್ಬಿಸಲು ಇದು ನೆಪವಾಯಿತು.

6) ಸರ್ಕಾರವು ಕಾನೂನು ಅಥವಾ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆಯೇ? ಅದು ಹೇಗೆ ಕಾರ್ಯರೂಪಕ್ಕೆ ಬರಬಲ್ಲದು?

ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವುದು ಅಥವಾ ಹೊರಡಿಸದಿರುವುದು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ರಾಜಕೀಯ ನಿರ್ಧಾರ. ಒಂದು ವೇಳೆ ಸರ್ಕಾರ ಮಸೂದೆ ತರಲು ಮುಂದಾದರೆ ಅದು ಇತರೆಲ್ಲ ಮಸೂದೆಗಳಂತೆಯೇ ಇರುತ್ತದೆ. ಇದನ್ನು ಅಂಗೀಕರಿಸಲು ಸರ್ಕಾರಕ್ಕೆ ಎರಡೂ ಸದನಗಳಲ್ಲಿ ಸಾಮಾನ್ಯ ಬಹುಮತ ಸಾಕು.ಇಂಥದ್ದೊಂದು ಕಾನೂನು ಜಾರಿಯಾಯಿತು ಎಂದೇ ಇಟ್ಟುಕೊಳ್ಳೋಣ. ಆನಂತರವೂ ಈ ಮಸೂದೆಯು ದೇಗುಲವನ್ನು ವಿವಾದಾತ್ಮಕ ಸ್ಥಳದಲ್ಲಿ ಕಟ್ಟಲು ಅವಕಾಶ ಕೊಡುತ್ತದೆಯೋ ಅಥವಾ ಮಸೀದಿ ಕೆಡವಿದ ಸ್ಥಳದ ಆಸುಪಾಸಿನಲ್ಲಿ ನಿರ್ಮಿಸಲು ಅವಕಾಶ ಮಾಡಿಕೊಡುತ್ತದೆಯೋ ಎನ್ನುವ ಪ್ರಶ್ನೆ ಮಾತ್ರ ಹಾಗೆಯೇ ಉಳಿಯುತ್ತದೆ.

7) ಒಂದು ವೇಳೆ ಮಂದಿರ ಪರ ಕಾನೂನು ರಚನೆಯಾದರೆ, ಅದು ನ್ಯಾಯಾಂಗದ ಪರೀಕ್ಷೆಯನ್ನು ಗೆಲ್ಲಬಲ್ಲುದೆ?

ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ ಹಸ್ತಕ್ಷೇಪ ಮಾಡುವುದು ಸಂವಿಧಾನಬಾಹಿರ ಎಂದು ಸುಪ್ರೀಂಕೋರ್ಟ್‌ ಈಗಾಗಲೇ ಹೇಳಿದೆ.ಬಾಬರಿ ಮಸೀದಿ ಕೆಡವಿದ ನಂತರ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಯೋಧ್ಯೆಯಲ್ಲಿ ಕೆಲವು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಕಾಯ್ದೆಯೊಂದನ್ನು 1993ರಲ್ಲಿ ಜಾರಿ ಮಾಡಿ, ಮಸೀದಿ ಸುತ್ತಲಿರುವ ಕೆಲವು ಸ್ಥಳಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ‘ಅಕ್ವಿಸಿಷನ್ ಆಫ್ ಸರ್ಟನ್ ಏರಿಯಾಸ್ ಅಟ್ ಅಯೋಧ್ಯಾ ಆ್ಯಕ್ಟ್– 1993’ ಹೆಸರಿನಲ್ಲಿ ಈ ಕಾಯ್ದೆ ಜಾರಿಯಾದಾಗ ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಇನ್ನೂ ಬಾಕಿ ಇತ್ತು. ಸುಪ್ರೀಂಕೋರ್ಟ್‌ನಲ್ಲಿ ಈ ಕಾಯ್ದೆಯನ್ನು ಪ್ರಶ್ನಿಸಿದಾಗ ಐವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠವು ಕಾಯ್ದೆಯನ್ನು ಎತ್ತಿ ಹಿಡಿದರು. ಆದರೆ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳನ್ನು ಪರಿಹಾರಕ್ಕೆ ಯಾವುದೇ ವ್ಯವಸ್ಥೆ ರೂಪಿಸದೆ, ಅವುಗಳ ವಿಚಾರಣೆಗೆ ತಡೆಯೊಡ್ಡುವ ಇದೇ ಕಾಯ್ದೆಯ ಸೆಕ್ಷನ್ 4 (3) ಸಂವಿಧಾನಬದ್ಧವಲ್ಲ ಎಂದು ಹೇಳಿತು.

8) ವಿಚಾರಣೆ ನಡೆಯುತ್ತಿರುವ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸಲು ಯತ್ನಿಸಿದಾಗ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬಹುದೆ?

ಸಂವಿಧಾನದ ಏಳನೇ ಪರಿಚ್ಛೇದವು ಸಂಸತ್ತು ಕಾನೂನು ರೂಪಿಸಲು ಪರಮಾಧಿಕಾರ ಹೊಂದಿರುವ 100 ಅಂಶಗಳನ್ನು ಪಟ್ಟಿ ಮಾಡುತ್ತದೆ. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಅಧಿಕಾರವಿರುವ ಸಮವರ್ತಿ ಪಟ್ಟಿಯಲ್ಲಿ 52 ಅಂಶಗಳಿವೆ. ಈ ಪಟ್ಟಿಯಲ್ಲಿರುವ ವಿಷಯಗಳ ಬಗ್ಗೆಯೂ ಸಂಸತ್ತು ಕಾಯ್ದೆ ರೂಪಿಸಬಹುದಾಗಿದೆ. ಈ ಎರಡೂ ಪಟ್ಟಿಗಳನ್ನು ಓದಿದಾಗ ಸಂಸತ್ತಿಗೆ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಕಾನೂನು ರೂಪಿಸಲು ಅಧಿಕಾರವಿರುವುದು ತಿಳಿದುಬರುತ್ತದೆ. ರಾಜ್ಯಪಟ್ಟಿ ಮತ್ತು ಸಮವರ್ತಿ ಪಟ್ಟಿಯಲ್ಲಿ ಇಲ್ಲದ ಯಾವುದೇ ವಿಷಯಗಳ ಬಗ್ಗೆ ಸಂಸತ್ತಿಗೆ ಕಾನೂನು ಮಾಡಲು ಸಂವಿಧಾನದ ಏಳನೇ ಪರಿಚ್ಛೇದ ಅವಕಾಶ ನೀಡುತ್ತದೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದಾಗಲೂ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗೆ ಇದೆ. ಇಂಥ ಕಾನೂನುಗಳು ಸಂವಿಧಾನಾತ್ಮಕವಾಗಿವೆಯೇ ಎಂಬುದನ್ನು ಪರಿಶೀಲಿಸುವ ಹೊಣೆಗಾರಿಕೆಯನ್ನು ಸಂವಿಧಾನವು ನ್ಯಾಯಾಲಯಗಳಿಗೆ ನೀಡಿದೆ.

9) ಈ ಪ್ರಕರಣ ಹೋಲುವ ಬೇರೆ ಯಾವುದಾದರೂ ಪ್ರಕರಣ ದೇಶದ ಇತಿಹಾಸದಲ್ಲಿದೆಯೇ?

ಸರ್ಕಾರಗಳು ಸುಗ್ರೀವಾಜ್ಞೆ ಜಾರಿ ಮಾಡಿದ ನಂತರ ನ್ಯಾಯಾಂಗ ನಿಂದನೆ ಆಗಬಹುದು ಎನ್ನುವ ಕಾರಣಕ್ಕೆ ಸಂಸತ್ತಿನಲ್ಲಿ ಅದನ್ನು ಹಿಂಪಡೆದ ಹಲವು ಉದಾಹರಣೆಗಳಿವೆ.ಉದಾಹರಣೆಗೆ ಕಳೆದ ಆಗಸ್ಟ್‌ನಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅನ್ವಯ ಬಂಧನಕ್ಕೆ ಒಳಗಾದವರನ್ನು ರಕ್ಷಿಸುವ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಆಶಯಗಳಿಗೆ ವ್ಯತಿರಿಕ್ತವಾಗಿದ್ದ ಮಸೂದೆಯೊಂದನ್ನು ಸಂಸತ್ತು ಅಂಗೀಕರಿಸಿತ್ತು. ತೀರ್ಪು ಮರುಪರಿಶೀಲನೆಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿದ್ದಾಗಲೇ ಸರ್ಕಾರವೂ ಸುಗ್ರೀವಾಜ್ಞೆಯನ್ನು ಜಾರಿ ಮಾಡಿತ್ತು.ಇಂಥದ್ದೇ ಮತ್ತೊಂದು ಪ್ರಕರಣ ‘ಅಕ್ವಿಸಿಷನ್ ಆಫ್ ಸರ್ಟನ್ ಏರಿಯಾಸ್ ಅಟ್ ಅಯೋಧ್ಯಾ ಆ್ಯಕ್ಟ್– 1993’ ಈ ಕಾಯ್ದೆ ಜಾರಿಯಾದಾಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ಸಂಬಂಧದ ಅರ್ಜಿಗಳ ವಿಚಾರಣೆ ಬಾಕಿಯಿತ್ತು. 2010ರಲ್ಲಿ ತೀರ್ಪು ನೀಡಿದ ಹೈಕೋರ್ಟ್‌ ಮೂವರು ಕಕ್ಷಿದಾರರಿಗೂ 2.77 ಎಕರೆ ಭೂಮಿಯನ್ನು ಹಂಚಿಕೊಟ್ಟಿತ್ತು.ಹೈಕೋರ್ಟ್‌ ತೀರ್ಪು ಹೊರಬಿದ್ದ ನಂತರ ಕಾಯ್ದೆಯು ತನ್ನಿಂತಾನೆ ಅನೂರ್ಜಿತಗೊಂಡಿತ್ತು.

10) ಇದು ನ್ಯಾಯಾಂಗಕ್ಕಿಂತಲೂ ಶಾಸಕಾಂಗವೇ ಹೆಚ್ಚು ಶಕ್ತ ಎಂಬುದನ್ನು ಸೂಚಿಸುತ್ತದೆಯೇ?

ಈ ಪ್ರಶ್ನೆಗೆ ಎರಡು ರೀತಿಯ ಉತ್ತರ ನೀಡಬಹುದು.ವಿವಾದಾತ್ಮಕ ಭೂಮಿಯಲ್ಲಿ ಮಂದಿರಕ್ಕಾಗಿ ಕಾನೂನು ರೂಪಿಸಲು ಸರ್ಕಾರಕ್ಕೆ ಸಾಕಷ್ಟು ಅಧಿಕಾರವಿದೆ. ಮತ್ತೊಂದೆಡೆ, ಸರ್ಕಾರ ರೂಪಿಸಿದ ಕಾನೂನು ಸಂವಿಧಾನಾತ್ಮಕವಾಗಿದೆಯೇ ಎಂಬುದನ್ನು ಪರಿಶೀಲಿಸುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆ. ಅಯೋಧ್ಯೆ ಪ್ರಕರಣದಲ್ಲಿ ಮಂದಿರ ನಿರ್ಮಾಣವನ್ನು ಸುಲಭಗೊಳಿಸಲುಸರ್ಕಾರ ಕಾನೂನು ಜಾರಿ ಮಾಡಿದರೆ, ಅದು ಒಂದು ವರ್ಗದ ವಿರುದ್ಧ ಮತ್ತೊಂದು ವರ್ಗಕ್ಕೆ ಅನುಕೂಲ ಕಲ್ಪಿಸಿದಂತೆ ಆಗುತ್ತದೆ. ಸರ್ವಸಮ್ಮತ ತೀರ್ಮಾನ ಸದ್ಯದ ಮಟ್ಟಿಗೆ ಸಾಧ್ಯವಿಲ್ಲ.

ಎರಡು ಪಕ್ಷಗಳ ನಡುವೆ ಸಹಮತ ಇಲ್ಲದಿರುವುದು ಎದ್ದು ತೋರುವಾಗ ಸರ್ಕಾರ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಗಳು ಈ ಹಿಂದೆ ಹಲವು ಬಾರಿ ಹೇಳಿವೆ.ಕಾವೇರಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ 1991ರಲ್ಲಿ ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ಸೂಚನೆಯಂತೆ ನ್ಯಾಯಾಲಯವು ತನ್ನ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿತ್ತು. ನ್ಯಾಯಾಲಯ ಆಗ ಹೇಳಿದ ಮಾತು, ಈಗ ಅಯೋಧ್ಯೆ ಪ್ರಕರಣಕ್ಕೂ ಅನ್ವಯಿಸುತ್ತದೆ.

‘ನ್ಯಾಯಾಲಯಗಳು ಕೊಟ್ಟಿರುವ ತೀರ್ಪುಗಳಿಗೆ ತಳಹದಿಯಾಗಿರುವ ಕಾನೂನುಗಳನ್ನು ಬದಲಿಸುವ ಅಧಿಕಾರ ಶಾಸಕಾಂಗಕ್ಕೆ ಇದೆ. ಇದರಿಂದ ನ್ಯಾಯಾಲಯಗಳು ಈ ಮೊದಲು ಕೊಟ್ಟಿರುವ ತೀರ್ಪುಗಳಿಗೆ ಸಂಬಂಧಿಸಿದ ಕಕ್ಷೀದಾರರ ಬದುಕಿನಲ್ಲಿಯೂ ಕೆಲವು ಪರಿಣಾಮಗಳು ಆಗಬಹುದು. ಆದರೆ, ನಿರ್ದಿಷ್ಟ ಗುಂಪು ಅಥವಾ ಜನರ ಬದುಕನ್ನೇ ಗುರಿಯಾಗಿಸಿಕೊಂಡು ಕಾನೂನು ಜಾರಿ ಮಾಡಲು ಆಗುವುದಿಲ್ಲ’ ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ರಂಗನಾಥ ಮಿಶ್ರಾ ನೇತೃತ್ವದಲ್ಲಿ ರಚನೆಯಾಗಿದ್ದ ಐವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿತ್ತು. ‘ಸಹಮತವಿಲ್ಲದ ಸಂದರ್ಭದಲ್ಲಿ ಶಾಸಕಾಂಗವು ಕಾನೂನಿನ ಮೂಲಕ ಅಧಿಕಾರ ಚಲಾಯಿಸಲು ಮುಂದಾದರೆ, ಅದನ್ನು ವಿಶೇಷ ನ್ಯಾಯಾಲಯ ಅಥವಾ ಪ್ರಾಧಿಕಾರದ ಮಾದರಿಯಲ್ಲಿ ನ್ಯಾಯ ತೀರ್ಮಾನಕ್ಕೆ ಮುಂದಾಗುವ ಕ್ರಮ ಎಂದೇ ಭಾವಿಸಬೇಕಾಗುತ್ತದೆ. ಸರ್ಕಾರ ಹೀಗೆ ವರ್ತಿಸುವುದನ್ನು ಸಂವಿಧಾನ ಒಪ್ಪುವುದಿಲ್ಲ’ ಎಂದು ಮಿಶ್ರಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT