‘ಮುಂದಿನ ದಿನಗಳಲ್ಲಿ ನಾವು ಸಂಪುಟದಲ್ಲಿ ಸೇರಿಕೊಂಡರೆ ‘ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ನಾವು ಪಟ್ಟು ಹಿಡಿದಿದ್ದೆವು’ ಎಂಬ ಸಂದೇಶ ರವಾನೆಯಾಗುತ್ತದೆ. ಅದನ್ನು ನಾವು ಬಯಸುವುದಿಲ್ಲ. ನಾವು ‘ಪ್ರಮಾಣಕ್ಕೆ ಅನುಸಾರ ಪ್ರಾತಿನಿಧ್ಯ’ವನ್ನು ಬಯಸುತ್ತೇವೆಯೇ ವಿನಾ ‘ಸಾಂಕೇತಿಕ ಪ್ರಾತಿನಿಧ್ಯ’ವನ್ನಲ್ಲ. ವಾಜಪೇಯಿ ಅವರ ಕಾಲದಲ್ಲಿ ಪ್ರಮಾಣಕ್ಕೆ ಅನುಸಾರ ಪ್ರಾತಿನಿಧ್ಯ ಇರುತ್ತಿತ್ತು ಮತ್ತು ಅದು ಸರ್ಕಾರ ರಚನೆಗೂ ಮೊದಲೇ ತೀರ್ಮಾನವಾಗುತ್ತಿತ್ತು. ಆಗ ಸಮ್ಮಿಶ್ರ ಸರ್ಕಾರ ಇತ್ತು. ಆದರೆ ಈಗ ಒಂದೇ ಪಕ್ಷಕ್ಕೆ ಬಹುಮತ ಇದೆ’ ಎಂದು ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ‘ಮುಂದೆಯೂ ಜೆಡಿಯು ಎನ್ಡಿಎಯ ಭಾಗವಾಗಿರುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.