ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಒಂದೇ ದಿನ 11 ಹೊಸ ಕೋವಿಡ್ 19 ಪ್ರಕರಣಗಳು ದೃಢವಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಹೆಲ್ತ್ ಬುಲೆಟಿನ್ನಲ್ಲಿ ಈ ಮಾಹಿತಿ ಬಹಿರಂಗವಾಗಿವೆ.
ಬೆಳಗಾವಿಯಲ್ಲಿ 4, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 3, ಕಲಬುರಗಿಯಲ್ಲಿ 2, ಮೈಸೂರಿನಲ್ಲಿ 1 ಮತ್ತು ವಿಜಯಪುರದಲ್ಲಿ 1 ಪ್ರಕರಣ ದೃಢವಾಗಿದೆ.
ಬೆಳಗಾವಿ: ಮತ್ತೆ ನಾಲ್ವರಿಗೆ ಕೋವಿಡ್-19
ಜಿಲ್ಲೆಯ ನಾಲ್ವರಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 14ಕ್ಕೆ ಏರಿದ್ದು, ಆತಂಕವೂ ಹೆಚ್ಚಾಗಿದೆ.
ಈಗಾಗಲೇ ಒಂದು ಪ್ರಕರಣ ವರದಿಯಾಗಿರುವ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಆ ರೋಗಿಯು ರೋಗಿ ನಂ. 128 ಜೊತೆ ಸಂಪರ್ಕ ಹೊಂದಿದ್ದವರು. ಉಳಿದವರು ರಾಯಬಾಗದವರು. ಇವರು ಕೂಡ ರೋಗಿಗಳ ಸಂಪರ್ಕಕ್ಕೆ ಬಂದಿದ್ದವರೇ ಆಗಿದ್ದಾರೆ. ಎಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿತರು 19, 38, 55 ಹಾಗೂ 25 ವರ್ಷ ವಯಸ್ಸಿನವರಾಗಿದ್ದಾರೆ.
ಮೈಸೂರಿನಲ್ಲಿ ಒಬ್ಬರಿಗೆ ಕೋವಿಡ್
ಜಿಲ್ಲೆಯಲ್ಲಿ ಭಾನುವಾರ ಒಬ್ಬರಲ್ಲಿ ಕೋವಿಡ್-19 ಪತ್ತೆಯಾಗಿದೆ. 32 ವರ್ಷ ವಯಸ್ಸಿನ ಇವರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ಸೋಂಕಿತ ನೌಕರರ ಸಂಪರ್ಕಕ್ಕೆ ಬಂದಿದ್ದರು.
ಕೋವಿಡ್ -19 ಪೀಡಿತರ ಸಂಖ್ಯೆ ಮೈಸೂರಿನಲ್ಲಿ 49 ಕ್ಕೆ ಏರಿದೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 11 ಹೊಸ #Covid19 ಪ್ರಕರಣಗಳು ಖಚಿತವಾಗಿತದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 226ಕ್ಕೆ ಏರಿದೆ. ಇದುವರೆಗೆ 47 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. #IndiaFightsCornonapic.twitter.com/qX43ZqZM6x