ದಾವಣಗರೆ: ಭೂಸ್ವಾಧೀನ ಕಾಯ್ದೆ, ಜಿಂದಾಲ್ ಕಂಪನಿಗೆ ಭೂಮಿ ನೀಡಿರುವುದು, ನೈಸ್ ಕಂಪನಿ ರೈತರಿಂದ ಭೂಮಿ ಕಸಿದುಕೊಳ್ಳುತ್ತಿರುವುದನ್ನು ವಿರೋಧಿಸಿ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಜುಲೈ 16ರಂದು ವಿಧಾನಸಭಾ ಅಧಿವೇಶನದ ವೇಳೆ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ದಾವಣಗೆರೆಯಲ್ಲಿ ಬುಧವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈ ವಿಷಯ ತಿಳಿಸಿದರು.
‘ರಾಜ್ಯದ ಹಿತಾಸಕ್ತಿ ಕಾಪಾಡಲು, ನಾಡಿನ ರಕ್ಷಣೆಗೆ ರೈತ ಚಳವಳಿ ಬದ್ಧರಾಗಿರಬೇಕು. ಚಳವಳಿ ಗಂಭೀರತೆ ಪಡೆಯಬೇಕು. ಈ ನಿಟ್ಟಿನಲ್ಲಿ ತೀವ್ರವಾದ ಚಳವಳಿ ನಡೆಸಲು ನಿರ್ಧರಿಸಿದ್ದು, ಅಂದು ಸಾವಿರಾರು ರೈತರು ಮುತ್ತಿಗೆ ಹಾಕಲಿದ್ದಾರೆ’ ಎಂದರು.