ಬೆಂಗಳೂರು: ‘ಕೊರೊನಾ ಲಾಕ್ಡೌನ್ನಿಂದಾಗಿ ಮುಚ್ಚಿದ್ದ ಕೈಗಾರಿಕೆಗಳು ಶೀಘ್ರ ಪುನರಾರಂಭಗೊಳ್ಳಲಿದ್ದು, ಕಾರ್ಮಿಕರ ಕಷ್ಟ ನಿವಾರಣೆಯಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಕಾರ್ಮಿಕ ದಿನದ ಪ್ರಯುಕ್ತ ಶುಕ್ರವಾರ ಸಂದೇಶ ನೀಡಿದ ಅವರು, ‘ಕೇಂದ್ರ ಸರ್ಕಾರದ ಸೂಚನೆ ಬಂದೊಡನೆ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆ ಪುನರಾರಂಭ ಮಾಡಲಿದ್ದು, ಅದಕ್ಕೆ ಕಾರ್ಮಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.
‘ಕೊರೊನಾದಿಂದ ದುಡಿದು ತಿನ್ನುವ ಕಾರ್ಮಿಕರಿಗೆ ಬಹಳ ತೊಂದರೆ ಆಗಿದೆ. ಇಂತಹ ಕಠಿಣ ಸಮಯದಲ್ಲಿ ಸರ್ಕಾರ ಜತೆಗೆ ಇದೆ. ಕಾರ್ಮಿಕರ ಹಿತ ಕಾಯಬೇಕು ಮತ್ತು ವೇತನ ಪಾವತಿ ಮಾಡಬೇಕು ಎಂದು ಉದ್ದಿಮೆಗಳ ಮುಖ್ಯಸ್ಥರಿಗೆ ತಿಳಿಸಲಾಗಿದೆ’ ಎಂದು ಹೇಳಿದ್ದಾರೆ.