ಬೆಂಗಳೂರು: ವಿಜಯಪುರದ ಬುರನಾಪುರ ಮತ್ತು ಮಾಧುಭಾವಿ ಗ್ರಾಮಗಳ ಸಮೀಪ ₹ 220 ಕೋಟಿ ವೆಚ್ಚದಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣನಿರ್ಮಾಣಗೊಳ್ಳಲಿದ್ದು, ಮುಂದಿನ ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೋಕೋಪಯೋಗಿ ಇಲಾಖೆಯ ಮೂಲಕ ಕಾಮಗಾರಿ ನಡೆಸಲಾಗುವುದು. ಮೊದಲ ಹಂತದಲ್ಲಿ ₹ 95 ಕೋಟಿ ವೆಚ್ಚದಲ್ಲಿ ರನ್ವೇ, ಟ್ಯಾಕ್ಸಿವೇ, ಅಪ್ರೊನ್, ಪಾರ್ಕಿಂಗ್ ಪ್ರದೇಶ, ಟರ್ಮಿನಲ್ ಕಟ್ಟಡ ಸಹಿತ ಅಗತ್ಯ ಕೆಲಸ ನಡೆಯಲಿದೆ ಎಂದು ತಿಳಿಸಿದ್ದಾರೆ.
ಉಡಾನ್ ಯೋಜನೆಯ ವ್ಯಾಪ್ತಿಗೊಳಪಡಿಸಿ ಅಭಿವೃದ್ಧಿಪಡಿಸಲಾಗುವುದು. ಆರಂಭದಲ್ಲಿ ಈ ವಿಮಾನನಿಲ್ದಾಣದಲ್ಲಿ 72 ಆಸನಗಳಿರುವ ಎಟಿಆರ್ ವಿಮಾನಗಳು ಬಂದು ಹೋಗಲಿವೆ. ಬಳಿಕ ಬೇಡಿಕೆಗೆ ಅನುಗುಣವಾಗಿ ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಎರಡನೇ ಹಂತದ ಬಾಕಿ ಉಳಿಯುವ ಕಾಮಗಾರಿಗಳಾದ ಎಟಿಸಿ ಮತ್ತು ಪೂರಕ ಕಟ್ಟಡಗಳು, ಇತರ ಕಾಮಗಾರಿಗಳನ್ನು ಮುಂದಿನ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.