ಬೆಂಗಳೂರು:ಮುಷ್ಕರ ಬೆಂಬಲಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬಸ್ ತಡೆಯಲು ಮುಂದಾದ ಪ್ರತಿಭಟನೆಕಾರರನ್ನು ಪೊಲೀಸರು ಚದುರಿಸಿದರು.
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಘೋಷಣೆ ಕೂಗಿದರು. ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಕರೆದೊಯ್ದರು.
ಮುಷ್ಕರ ಬೆಂಬಲಿಸಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಬಳಿ ಪ್ರತಿಭಟನೆ. ರಸ್ತೆಯಲ್ಲೇ ಕುಳಿತ ಪ್ರತಿಭಟನೆಕಾರರಿಂದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ. ಪೊಲೀಸರಿಂದ ಬಿಗಿ ಭದ್ರತೆ.
ಪ್ರತಿಭಟನಾಕಾರರು ರಸ್ತೆಯಲ್ಲಿರುವುದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ರಸ್ತೆಯಿಂದ ತೆರಳುವಂತೆ ಹೇಳಿದರೂ ಪ್ರತಿಭಟನಾಕಾರರು ಕದಲದೆ ಘೋಷಣೆ ಕೂಗಿದರು.