ಬೆಂಗಳೂರು: ‘ದೇಶದ್ರೋಹ’ ಆರೋಪದಡಿ ನ್ಯಾಯಾಂಗ ಬಂಧನದಲ್ಲಿದ್ದ ಅಮೂಲ್ಯಾ ಲಿಯೋನ್ (19) ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪಶ್ಚಿಮ ವಿಭಾಗದ ಪೊಲೀಸರ ಕಸ್ಟಡಿಗೆ ನೀಡಲಾಗಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಫೆ. 20ರಂದು ನಡೆದಿದ್ದ ಪ್ರತಿಭಟನೆಯಲ್ಲಿ ಅಮೂಲ್ಯಾ ಲಿಯೋನ್, ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದರು. ವೇದಿಕೆಯಲ್ಲೇ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದಲೇ ಅವರು ನ್ಯಾಯಾಂಗ ಬಂಧನದಲ್ಲಿದ್ದರು.
‘ಪ್ರಕರಣ ಸಂಬಂಧ ಪ್ರತಿಭಟನೆ ಆಯೋಜಕರು ಸೇರಿ ಹಲವರ ಹೇಳಿಕೆ ಪಡೆಯಲಾಗಿದೆ. ಅಮೂಲ್ಯಾ ವಿಚಾರಣೆ ಅಗತ್ಯವಿದ್ದು, ಕಸ್ಟಡಿಗೆ ನೀಡಬೇಕು’ ಎಂದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ನ್ಯಾಯಾಲಯ, ಅಮೂಲ್ಯಾ ಅವರನ್ನು 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಅಮೂಲ್ಯಾ ಪರ ವಕಾಲತ್ತು ವಹಿಸಲು ಕೆಲ ವಕೀಲರು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕೆ ಹಲವು ವಕೀಲರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ‘ದೇಶದ್ರೋಹ ಎಸಗಿರುವ ಅಮೂಲ್ಯಾ ಪರ ವಕಾಲತ್ತು ವಹಿಸಬಾರದು’ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಈ ಗೊಂದಲದ ಕಾರಣಕ್ಕೆ, ‘ವಿಡಿಯೊ ಕಾನ್ಫರೆನ್ಸ್ ಮೂಲಕವೇ ಅಮೂಲ್ಯಾ ಅವರ ವಿಚಾರಣೆ ನಡೆಸಬೇಕು’ ಎಂದು ತನಿಖಾಧಿಕಾರಿ ನ್ಯಾಯಾಲಯವನ್ನು ಕೋರಿದ್ದರು.