ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ ಜೀವನಯಾನ

Last Updated 13 ನವೆಂಬರ್ 2018, 3:53 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ತಂತ್ರಗಾರಿಕೆ ಮತ್ತು ಪಕ್ಷದ ಸಂಘಟನೆ ಮೂಲಕ ಅನಂತ್‌ ಕುಮಾರ್ ಅವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಬೀರಿದರು.

ಅಂದುಕೊಂಡ ಯೋಜನೆ ಮತ್ತು ಕಾರ್ಯಕ್ರಮಗಳನ್ನುಪಟ್ಟು ಹಿಡಿದು ಅನುಷ್ಠಾನಗೊಳಿಸುವಲ್ಲಿ ನಿಸ್ಸೀಮರಾಗಿದ್ದರು.ಚಿಕ್ಕ ವಯಸ್ಸಿನಲ್ಲೇ ಅಟಲ್‌ ಬಿಹಾರಿ ವಾಜಪೇಯಿ ಸಚಿವ ಸಂಪುಟದಲ್ಲಿ ಸಚಿವರಾಗುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಯಶಸ್ಸಿನ ಮೆಟ್ಟಿಲು ಹತ್ತುತ್ತಲೇ ಹೋದರು.

ಸಮಾಜ ಸೇವೆ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಅನಂತ್ ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸದಸ್ಯರಾಗಿದ್ದರು. 1975–77 ರ ಅವಧಿಯಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಜಯಪ್ರಕಾಶ್‌ ನಾರಾಯಣ್‌ ಕರೆಗೆ ಓಗೊಟ್ಟು ಹೋರಾಟಕ್ಕೆ ಧುಮುಕಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದಾಗ ಅವರಿಗೆ ಕೇವಲ 16 ವರ್ಷ.

1987 ರಲ್ಲಿ ಭಾರತೀಯ ಜನತಾ ಪಕ್ಷ ಸೇರಿದರು. ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1988 ರಲ್ಲಿ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1995 ರ ವರೆಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 1995 ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು.

ಹಿಂತಿರುಗಿ ನೋಡದ ಅನಂತ್: 1996 ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ಆ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲೂ ನಿರಂತರವಾಗಿ ಗೆಲುವು ಸಾಧಿಸಿದರು. ಒಟ್ಟು 22 ವರ್ಷ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾದಾಗ ಅವರು, ರೈಲ್ವೆ ಮತ್ತು ಕೈಗಾರಿಕಾ ಇಲಾಖೆಯ ವಿವಿಧ ಸಮಿತಿಗಳಿಗೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. 1998 ರಲ್ಲಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ನಾಗರಿಕ ವಿಮಾನ ಯಾನ ಖಾತೆ ಸಚಿವರಾದರು.

ಬಳಿಕ ಅವರು ಪ್ರವಾಸೋದ್ಯಮ, ಕ್ರೀಡೆ, ಯುವ ಜನ ಸೇವೆಗಳು ಮತ್ತು ಸಂಸ್ಕೃತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ನಗರಾಭಿವೃದ್ಧಿ ಮತ್ತು ಬಡತನ ನಿವಾರಣೆ ಸಚಿವರಾಗಿಯೂ ವಾಜಪೇಯಿ ಸಂಪುಟದಲ್ಲಿ ಕಾರ್ಯ ನಿವರ್ಹಿಸಿದ್ದರು. ನಗರಾಭಿವೃದ್ಧಿ ಸಚಿವರಾಗಿ ನಗರ ಪ್ರದೇಶಗಳ ಬಡವರಿಗಾಗಿ ವಾಂಬೆ (ವಾಲ್ಮೀಕಿ ಅಂಬೇಡ್ಕರ್‌ ಆವಾಸ್‌ ಯೋಜನಾ) ಮನೆಗಳ ನಿರ್ಮಾಣ ಯೋಜನೆ ಆರಂಭಿಸಿದರು. ಮನೆ ಮತ್ತು ಶೌಚಾಲಯವನ್ನು ಒಳಗೊಂಡ ಯೋಜನೆ ಇದಾಗಿತ್ತು.

2003 ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದರು. ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ ಎಸ್‌. ಬಂಗಾರಪ್ಪ, ಬಿ. ರಾಜಶೇಖರ ಮೂರ್ತಿ ಅವರನ್ನು ಪಕ್ಷಕ್ಕೆ ಕರೆತಂದರು. ಇದರಿಂದಾಗಿ ಬಿಜೆಪಿ 2004 ರ ಚುನಾವಣೆಯಲ್ಲಿ 79 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅದೇ ಸಂದರ್ಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿತು.

ಮಧ್ಯಪ್ರದೇಶ, ಜಾರ್ಖಂಡ್‌, ಛತ್ತಿಸಗಡ ಮತ್ತು ಬಿಹಾರ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷದ ಉಸ್ತುವಾರಿ ವಹಿಸಿದ್ದರು. ಬಿಹಾರ ಬಿಟ್ಟು ಉಳಿದ ಕಡೆಗಳಲ್ಲಿ ಬಿಜೆಪಿ ವಿಜಯದ ಪತಾಕೆ ಹಾರಿಸುವಂತೆ ಮಾಡಿದ್ದರು.

ಅದಮ್ಯ ಚೇತನ: ತಮ್ಮ ಪತ್ನಿ ಜತೆ ಸೇರಿ ‘ಅದಮ್ಯ ಚೇತನ’ ಎಂಬ ಸೇವಾ ಸಂಸ್ಥೆಯನ್ನು ಆರಂಭಿಸಿದರು. ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿ ಮತ್ತು ರಾಜಸ್ಥಾನದ ಜೋಧಪುರದಲ್ಲಿ ಶಾಲಾ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ಪೂರೈಸುವ ಕಾರ್ಯವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. 2 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ.

ಅಭಿವೃದ್ಧಿಯತ್ತ ಕಾಳಜಿಯ ಚಿತ್ತ...

*ನಗರಾಭಿವೃದ್ಧಿ ಸಚಿವರಾಗಿದ್ದಾಗ ರಾಷ್ಟ್ರೀಯ ನಗರ ಸಾರಿಗೆ ಯೋಜನೆ ರೂಪಿಸಿ, ಅದರಡಿ ಕೋಲ್ಕತ್ತ, ಅಹಮದಾಬಾದ್‌, ದೆಹಲಿ, ಲಖನೌ, ಮುಂಬೈ, ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ಮೆಟ್ರೊ ರೈಲು ಯೋಜನೆ ಆರಂಭವಾಗಲು ಕಾರಣರಾದರು.

* 2003 ರಲ್ಲಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದಾಗ ಬೆಂಗಳೂರಿನ ನಮ್ಮ ಮೆಟ್ರೊ ಯೋಜನೆಗೆ ಒಪ್ಪಿಗೆ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದರು.

* ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಜಾರಿಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದೇವೇಗೌಡರು ಪ್ರಧಾನಿ ಆಗಿದ್ದಾಗ ಈ ಯೋಜನೆಗೆ ಅನುಮೋದನೆ ಸಿಕ್ಕಿದ್ದರೂ ಬಳಿಕ ನನೆಗುದಿಗೆ ಬಿದ್ದಿತ್ತು. ವಾಜಪೇಯಿ ಸಂಪುಟದಲ್ಲಿ ಅದಕ್ಕೆ ಮರು ಚಾಲನೆ ನೀಡಿದರು.

* ಮೋದಿ ಸರ್ಕಾರದಲ್ಲಿ ರಸಗೊಬ್ಬರ ಸಚಿವರಾಗಿ ಶೇ 100 ರಷ್ಟು ಬೇವು ಲೇಪಿತ ಯೂರಿಯಾ ಗೊಬ್ಬರ ಉತ್ಪಾದನೆಗೆ ಚಾಲನೆ ನೀಡಿದರು. ಇದರಿಂದಾಗಿ ಅನ್ಯ ಉದ್ದೇಶಗಳಿಗಾಗಿ ಕೈಗಾರಿಕಾ ಘಟಕಗಳಿಗೆ ಯೂರಿಯಾ ಅಕ್ರಮ ಸಾಗಣೆಗೆ ಕಡಿವಾಣ ಬಿದ್ದಿತು. ರಸಗೊಬ್ಬರಕ್ಕಾಗಿ ರೈತರು ಪರದಾಡುವುದಕ್ಕೆ ತೆರೆ.

* ಕಡು ಬಡವರಿಗೆ ಕಡಿಮೆ ಬೆಲೆಯಲ್ಲಿ ಔಷಧ ಒದಗಿಸಲು ದೇಶಾದ್ಯಂತ ಜನೌಷಧಿ ಕೇಂದ್ರಗಳ ಆರಂಭ. ಕಡಿಮೆ ದರದಲ್ಲಿ ಸ್ಟೆಂಟ್‌ ಪೂರೈಸುವ ಯೋಜನೆ.

* ಕನ್ನಡದ ಅಭಿಮಾನಿಯಾಗಿದ್ದ ಅನಂತ್‌ 2015 ರಲ್ಲಿ ವಿಶ್ವಸಂಸ್ಥೆಯ 67 ನೇ ಸಾಮಾನ್ಯ ಸಭೆಯಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಇತಿಹಾಸ ನಿರ್ಮಿಸಿದರು. ಆ ವೇದಿಕೆಯಲ್ಲಿ ಕನ್ನಡ ಮಾತನಾಡಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

**

ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ಥಿವ ಶರೀರದ ಮುಂದೆ ಸಂಸದ ಪ್ರಹ್ಲಾದ ಜೋಶಿ ಅವರು ಮನೆಯವರನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತರು. ಕೇಂದ್ರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ಇದ್ದರು–ಪ್ರಜಾವಾಣಿ ಚಿತ್ರ/ಕೋಟೆಕಾರ್‌
ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ಥಿವ ಶರೀರದ ಮುಂದೆ ಸಂಸದ ಪ್ರಹ್ಲಾದ ಜೋಶಿ ಅವರು ಮನೆಯವರನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತರು. ಕೇಂದ್ರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ಇದ್ದರು–ಪ್ರಜಾವಾಣಿ ಚಿತ್ರ/ಕೋಟೆಕಾರ್‌

ಗಣ್ಯರ ಕಂಬನಿ

ಸಾರ್ವಜನಿಕ ಜೀವನಕ್ಕೆ ಅನಂತಕುಮಾರ್‌ ಕೊಡುಗೆ ಅಪಾರ, ಇವರ ನಿಧನ ಕರ್ನಾಟಕ ಮಾತ್ರವಲ್ಲ ದೇಶಕ್ಕೇ ತುಂಬಲಾಗದ ನಷ್ಟ.
ರಾಮನಾಥ ಕೋವಿಂದ್‌,ರಾಷ್ಟ್ರಪತಿ

**

ಚಿಕ್ಕ ವಯಸ್ಸಿನಲ್ಲೇ ಸಾರ್ವಜನಿಕ ಜೀವನಕ್ಕೆ ಬಂದ ಅನಂತ್‌ ಅವರಿಗೆ ಸಮಾಜದ ಬಗ್ಗೆ ಅತೀವ ಶ್ರದ್ಧೆ ಮತ್ತು ಬದ್ಧತೆ ಇತ್ತು. ಅದಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದರು.
–ನರೇಂದ್ರ ಮೋದಿ,ಪ್ರಧಾನ ಮಂತ್ರಿ

**

ಜನಪ್ರಿಯ ಮತ್ತು ಕ್ರಿಯಾಶೀಲ ನಾಯಕ. ಬಡವರು ಮತ್ತು ತುಳಿತಕ್ಕೊಳಗಾದವರ ಅಭ್ಯುದಯಕ್ಕಾಗಿ ಶ್ರಮಿಸಿದರು.
–ಎಲ್‌.ಕೆ.ಅಡ್ವಾಣಿ,ಹಿರಿಯ ನಾಯಕ, ಬಿಜೆಪಿ

**

ಅನಂತ್ ಅವರ ನಿಧನದ ಸುದ್ದಿ ಆಘಾತ ತಂದಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ.
–ರಾಹುಲ್‌ ಗಾಂಧಿ,ಅಧ್ಯಕ್ಷರು, ಎಐಸಿಸಿ

**

ರಾಜಕೀಯವಾಗಿ ಬಹಳ ಬೇಗ ಉನ್ನತ ಸ್ಥಾನ ಏರಿದ ಅವರು ಕ್ಲಿಷ್ಟ ಸಂದರ್ಭಗಳಲ್ಲಿ ಉತ್ತಮ ಸಲಹೆಗಳನ್ನು ನೀಡಿ ಪಕ್ಷವನ್ನು ಗಟ್ಟಿಗೊಳಿಸಿದರು.
–ಬಿ.ಎಸ್‌.ಯಡಿಯೂರಪ್ಪ,ಅಧ್ಯಕ್ಷರು, ರಾಜ್ಯ ಬಿಜೆಪಿ

**

ಸೃಜನಶೀಲ ಮತ್ತು ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಮನಸ್ಸಿಗೆ ನೋವಾಗಿದೆ.
–ಎಚ್‌.ಡಿ.ದೇವೇಗೌಡ,ರಾಷ್ಟ್ರೀಯ ಅಧ್ಯಕ್ಷ,ಜೆಡಿಎಸ್‌

**

ಮೌಲ್ಯಾಧಾರಿತ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದರು. ರಾಜ್ಯ, ದೇಶಕ್ಕೆ ನೀಡಿದ ಕೊಡುಗೆ ಅಪಾರ. ಜನಪರ ಕಾಳಜಿಯಿಂದ ಬೆಂಗಳೂರಿನ ಕಣ್ಮಣಿಯಾಗಿದ್ದರು.
–ಎಚ್‌.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ

**

ಬೇರೆ– ಬೇರೆ ಸಿದ್ಧಾಂತಕ್ಕೆ ಸೇರಿದ್ದರೂ ಉತ್ತಮ ಸ್ನೇಹಿತರಾಗಿದ್ದೆವು. ರಾಜ್ಯದ ಹಿತದ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
–ಸಿದ್ದರಾಮಯ್ಯ,ಅಧ್ಯಕ್ಷ, ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ

**

ಅನಂತ್‌ ಕುಮಾರ್‌ ಅವರ ಪ್ರೀತಿಗೆ ಭಾಷೆ, ಪ್ರಾಂತ್ಯ, ಪಕ್ಷ ಜಾತಿ ಮತ್ತು ಧರ್ಮದ ಗಡಿ ಇರಲಿಲ್ಲ. ಸಂಸತ್ತಿನೊಳಗೆ ಏರು ದನಿಯಲ್ಲಿ ಮಾತನಾಡಿ ಹೊರಬಂದಾಗ ನಗೆ ಬೀರಿ ಎಲ್ಲವನ್ನೂ ಮರೆಸುತ್ತಿದ್ದರು
– ಮಲ್ಲಿಕಾರ್ಜುನ ಖರ್ಗೆ,ಲೋಕಸಭೆ ಕಾಂಗ್ರೆಸ್‌ ನಾಯಕ

**

ರಾಜ್ಯದಲ್ಲಿ, ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿದ್ದಾಗ ಅನಂತ್‌ ಕುಮಾರ್ ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು. ಆಗಾಗ್ಗೆ ಹಾಸನಕ್ಕೂ ಬಂದು ನನ್ನ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು
–ಕ್ಯಾಪ್ಟನ್‌ ಗೋಪಿನಾಥ್,ಉದ್ಯಮಿ

**

ರಾಜ್ಯದ ನೆಲ, ಜಲ, ಭಾಷೆ, ಸಾಹಿತ್ಯ ಸೇರಿದಂತೆ ಯಾವುದೇ ವಿಷಯದಲ್ಲೂ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದರು. ಅವರ ನಿಧನ ರಾಷ್ಟ್ರ ಹಾಗೂ ಕರ್ನಾಟಕಕ್ಕೆ ತುಂಬಲಾರದ ನಷ್ಟ
–ನಿರ್ಮಲಾನಂದನಾಥ ಸ್ವಾಮೀಜಿ,ಆದಿಚುಂಚನಗಿರಿ ಮಠ

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT