ಬಳ್ಳಾರಿ:ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಲುವಾಗಿ ಸಮಿತಿಯೊಂದನ್ನು ರಚಿಸಿ, ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಪ್ರತಿನಿಧಿಗಳೂ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ಪ್ರಯತ್ನ ಪಡಬಹುದಾಗಿತ್ತು ಎಂಬುದನ್ನು ಒಪ್ಪುತ್ತೇನೆ. ಆದರೆ ಜಿಲ್ಲೆಯ ಅಭಿವೃದ್ಧಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ಎಲ್ಲ ಯೋಜನೆಗಳೂ ಕ್ಷಿಪ್ರಗತಿಯಲ್ಲಿ ಆರಂಭವಾಗಲು ಎಲ್ಲ ಪ್ರಯತ್ನಗಳು ನಡಯಲಿವೆ. ಅದಕ್ಕಾಗಿ ಎಲ್ಲ ಪಕ್ಷಗಳ ಸಹಕಾರವನ್ನೂ ಪಡೆಯುತ್ತೇವೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಜಿಲ್ಲೆಯ ಎಲ್ಲೆಡೆ ಪ್ರವಾಸ ಮಾಡಿ ಜನರೊಂದಿಗೆ ಚರ್ಚಿಸಿರುವೆ. ಪ್ರಕೃತಿ ಸಂಪತ್ತು ಜನರಿಗೆ ನೀಡಿದ ದೊಡ್ಡ ಅವಕಾಶ. ಆದರೆ ಅದು ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿಲ್ಲಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಖನಿಜ ನಿಧಿ ಅಡಿಯಲ್ಲಿ ಲಭ್ಯವಿರುವ ₹13,383 ಕೋಟಿಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ದೊರೆತ ಕೂಡಲೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ. ಅಭಿವೃದ್ಧಿಗೆ ಇರುವ ಗಡುವಿನೊಳಗೇ ಪೂರ್ಣಗೊಳಿಸಲಾಗುವುದು ಎಂದರು.
ಆರು ತಿಂಗಳಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆಎಂದರು.
ಹಲವು ಸರ್ಕಾರಗಳು ಅಭಿವೃದ್ಧಿ ಮಾಡಿವೆ. ಈಗಿನ ಸನ್ನಿವೇಶದಲ್ಲಿ ಜಿಲ್ಲೆಯ ಲ್ಲಿ ಮೊದಲು ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೌಕರ್ಯ ದೊರಕಬೇಕಾಗಿದೆಎಂದರು.
ತುಂಗಭದ್ರಾ ಜಲಾಶಯದ ನೀರಿ ಎಲ್ಲರಿಗೂ ದೊರಕುತ್ತಿಲ್ಲ. ಕೆಲವು ತಾಲೂಕುಗಳು ನೀರು ಬಳಸದ ಸನ್ನಿವೇಶವಿಲ್ಲ. ಕುಡಿಯುವ ನೀರಿಗೂ ಅಭಾವವಿದೆ. ನಗರದಲ್ಲೂ ಸಮಸ್ಯೆ ಇದೆ.೨೪*೭ ನೀರು ಸೌಕರ್ಯ ಇನ್ನೂ ದೊರಕಿಲ್ಲಎಂದರು.
ದೂಳಿನಿಂದ ಜಿಲ್ಲೆಯ ಜನರ ಆರೋಗ್ಯದ ಮೇಲೆ ಆಗಿರುವ ದುಷ್ಪರಿಣಾಮ ದ ಕುರಿತು ಅಧ್ಯಯನ ನಡೆಯಬೇಕಾಗಿದೆ. ಹಸಿರೀಕರಣವೂ ದೊಡ್ಡ ಮಟ್ಟದಲ್ಲಿ ಅಗತ್ಯವಿದೆಎಂದರು.
ಜೀನ್ಸ್ ಸಿದ್ಧ ಉಡುಪು ತಯಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿಗೆ ನೆರವು, ಯುವ ಜನರಿಗೆ ಉದ್ಯೋಗ, ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಲಾಗುವುದುಎಂದರು.
ನಾನು ಎಷ್ಟು ದಿನ ಜಿಲ್ಲೆಯಲ್ಲಿರುವೆ ಎಂಬುದು ಮುಖ್ಯವಲ್ಲ. ಏನು ಅಭಿವೃದ್ಧಿ ಮಾಡುತ್ತೇವೆ ಎಂಬುದು ಮುಖ್ಯ. ನಾನು ಉಸ್ತುವಾರಿ ಸಚಿವನಾಗಿರುವುದು ಸಚಿವ ಸಂಪುಟದ ನಿರ್ಧಾರಎಂದರು.
ಉಪಚುನಾವಣೆ ಮುಗಿದ ವಾರಕ್ಕೆ ಜಿಲ್ಲೆಯಲ್ಲಿ ಅನಧಿಕೃ ರಿಕ್ರಿಯೇಶನ್ ಕ್ಲಬ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಎಂದರು.
ಅಣ್ಣ ಎನ್ನದೆ ಏನನ್ನಲಿ?: ‘ಬಿಜೆಪಿಯ ಶಾಸಕ ಶ್ರೀರಾಮುಲು ಅವರನ್ನು ಅಣ್ಣ ಎನ್ನದೆ ಏನನ್ನಲಿ? ಅಣ್ಣ ಎಂದರೆ ತಪ್ಪೇ? ರಾಮುಲು ಹೇಳಿದಂತೆ ಅದು ಲೇವಡಿ ಅಲ್ಲ. ಏಕವಚನದಲ್ಲಿ ಮಾತನಾಡಿದರೂ ತಪ್ಪೆನ್ನುತ್ತೀರಿ. ಶ್ರೀರಾಮುಲು ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ. ಅವರು ಕಾಂಗ್ರೆಸ್ನಿಂದ ಎಲ್ಲೆಲ್ಲಿಗೆ ಹೋಗಿ ಬಿಜೆಪಿಗೆ ಬಂದರು ಎಂಬುದನ್ನೆಲ್ಲ ಇಲ್ಲಿ ಚರ್ಚಿಸುವುದಿಲ್ಲ’ ಎಂದರು.
ಮೂರು ಬಾರಿ ಶಾಸಕರಾಗಿರುವ ಸಂಡೂರು ಶಾಸಕ ಈ ತುಕಾರಾಂ ಅವರಿಗೆ ಸಚಿವ ಸ್ಥಾನ ದೊರಕುವುದೇ ಎಂಬ ಪ್ರಶ್ನೆಗೆ ಅವರು, 'ನಾನು ಮುಖ್ಯಮಂತ್ರಿಯಾದಾಗ ಅದಕ್ಕೆ ಉತ್ತರ ಹೇಳುವೆ' ಎಂದರು.
ಜನಾರ್ದನ ರೆಡ್ಡಿ ಅವರ ಸಂಸ್ಕೃತಿಯನ್ನು ತೋರಿಸಿದ್ದಾರೆ. ಅವರ ಬಗ್ಗೆ ಪ್ರತಿಕ್ರಿಯಿಸಲಾರೆ. ಬಿಜೆಪಿ ಮುಖಂಡರು ಆ ಮಾತುಗಳನ್ನು ಹೇಳಿದ್ದರೆ ಪ್ರತಿಕ್ರಿಯಿಸುತ್ತಿದ್ದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.