ಬೆಂಗಳೂರು: ‘ಮೈತ್ರಿ’ ಸರ್ಕಾರ ಪತನಗೊಳಿಸಿ ಬಿಜೆಪಿಗೆ ಬಂದಿದ್ದ ಎಂ.ಟಿ.ಬಿ.ನಾಗರಾಜ್, ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಅವರ ಹೆಸರನ್ನು ವಿಧಾನಪರಿಷತ್ ಚುನಾವಣಾ ಅಭ್ಯರ್ಥಿಗಳಾಗಿ ಬಿಜೆಪಿ ಪ್ರಮುಖರ ಸಭೆಯು ಕೇಂದ್ರ ಸಮಿತಿಗೆ ಶಿಫಾರಸು ಮಾಡಿದೆ.
ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳವುದನ್ನು ಕೇಂದ್ರ ಚುನಾವಣಾ ಸಮಿತಿಗೇ ಬಿಡಲಾಗಿದೆ. ಈ ಮೂವರಲ್ಲಿ ಶಂಕರ್ ಅವರಿಗೆ ಟಿಕೆಟ್ ಸಿಗುವಸಾಧ್ಯತೆ ಹೆಚ್ಚು. ಉಳಿದ ಇಬ್ಬರಲ್ಲಿ ಒಬ್ಬರಿಗಷ್ಟೇ ಅವಕಾಶ ಸಿಗಬಹುದು ಎನ್ನಲಾಗಿದೆ.
ಈ ಮೂಲಕ ನಾಲ್ಕು ಸ್ಥಾನಗಳ ಪೈಕಿ 2 ಸ್ಥಾನಗಳನ್ನು ವಲಸೆ ಬಂದವರಿಗೂ ಉಳಿದ 2 ಸ್ಥಾನಗಳನ್ನು ಮೂಲ ಬಿಜೆಪಿಯವರಿಗೆ ನೀಡುವ ಸಾಧ್ಯತೆ ಇದೆ. ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಇತರರು ಇದ್ದರು.