ಬಳ್ಳಾರಿ: ‘ಸಿರುಗುಪ್ಪದ ಎನ್ಎಸ್ಎಲ್ ಕಬ್ಬಿನ ಕಾರ್ಖಾನೆಯವರು ನ.22ರಂದು ನಡೆಯಲಿರುವ ಸಭೆಯಲ್ಲಿ ರೈತರ ಪರ ನಿರ್ಣಯ ಕೈಗೊಳ್ಳದಿದ್ದರೆ, ಜಿಲ್ಲೆಯಾದ್ಯಂತ ಬಂದ್ ಮಾಡಿ ಕಾರ್ಖಾನೆಗೆ ಬೆಂಕಿ ಇಟ್ಟು ಭಸ್ಮ ಮಾಡುತ್ತೇವೆ’ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಎಚ್ಚರಿಕೆ ನೀಡಿದರು.
‘ಕಾರ್ಖಾನೆಯವರು 7,763 ಎಕರೆಗೆ ಬಿತ್ತನೆ ಬೀಜ ಕೊಟ್ಟು ಕಬ್ಬನ್ನು ತಾವೇ ಖರೀದಿಸುವುದಾಗಿ ಪತ್ರ ಬರೆದು ಕೊಟ್ಟಿದ್ದಾರೆ. ಆದರೆ, ನಷ್ಟದ ಭೀತಿಯಿಂದ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನ.19ರಂದು ಮೂರು ಸಭೆಗಳು ನಡೆದಿದ್ದು, ಮತ್ತೊಂದು ಸಭೆಯನ್ನು ನ.22ರಂದು ಕರೆದಿದ್ದಾರೆ. ಸಭೆಗೆ ಹಾಜರಾಗದಿದ್ದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದರು.