ಬೆಂಗಳೂರು:ಸಚಿವ ಚನ್ನಬಸಪ್ಪ.ಎಸ್.ಶಿವಳ್ಳಿ ಅವರ ನಿಧನದಿಂದ ತೆರೆವಾಗಿರುವ ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭೆ ಕ್ಷೇತ್ರವೂ ಸೇರಿದಂತೆ ರಾಷ್ಟ್ರದ ವಿವಿಧ 6 ಕ್ಷೇತ್ರಗಳ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗವು ಮೇ 19ರಂದು ನಿಗದಿಗೊಳಿಸಿದೆ.
ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ ಪರ್ರೀಕರ್ ಅವರ ನಿಧನದಿಂದಾಗಿ ತೆರವಾಗಿರುವ ಪಣಜಿ ಕ್ಷೇತ್ರ ಹಾಗೂ ತಮಿಳುನಾಡಿನ 4 ವಿಧಾನಸಭೆ ಕ್ಷೇತ್ರಗಳಿಗೂ ಇದೇ ದಿನ ಉಪ ಚುನಾವಣೆ ನಿಡೆಯಲಿದೆ. ಉಪಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಏಪ್ರಿಲ್ 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಏಪ್ರಿಲ್ 22ರಂದು ಈ ಉಪಚುನಾವಣೆಯ ಅಧಿಸೂಚನೆ ಜಾರಿಯಾಗಲಿದೆ. ಏಪ್ರಿಲ್ 30ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದೆ ಪಡೆಯಲು ಮೇ 2 ಕೊನೆಯ ದಿನ. ಮೇ 23 ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಸಿ.ಎಸ್. ಶಿವಳ್ಳಿ ಕಳೆದ ಮಾರ್ಚ್ 22ರಂದು ಹುಬ್ಬಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಮನೋಹರ ಪರ್ರೀಕರ್ ಅವರು ಮಾರ್ಚ್ 17ರಂದು ಕ್ಯಾನ್ಸರ್ನಿಂದ ಪಣಜಿಯಲ್ಲಿ ಮೃತಪಟ್ಟಿದ್ದರು.